ಮೈಸೂರು: ಅನೈತಿಕ ಸಂಬಂಧ ಸಂಶಯ ಹಿನ್ನೆಯಲ್ಲಿ ಪತಿಯೋರ್ವ ಪತ್ನಿಯನ್ನೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಹುಣಸೂರಿನ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ನಡೆದಿದೆ.
ಮೃತರನ್ನು ಹುಣಸೂರಿನ ಕಲ್ಕುಣಿಕೆ ಮಾರಿಗುಡಿ ಬೀದಿ ನಿವಾಸಿ ರವಿ ಎಂಬವನ ಪತ್ನಿ ಸೌಮ್ಯ(31) ಎಂದು ಗುರುತಿಸಲಾಗಿದೆ. ಇವರು ಮಂಡ್ಯದ ಸಾತನೂರು ಗ್ರಾಮದವರಾಗಿದ್ದು, 11 ವರ್ಷಗಳ ಹಿಂದೆ ರವಿಯನ್ನು ವಿವಾಹವಾಗಿದ್ದರು. ಇವರು ಆಶಾ ಕಾರ್ಯಕರ್ತೆ ಆಗಿ ದುಡಿಯುತ್ತಿದ್ದರು ಎಂದು ತಿಳಿದು ಬಂದಿದೆ.
ಈ ದಂಪತಿಗೆ 9 ಹಾಗೂ 7 ವರ್ಷದ ಎರಡು ಗಂಡು ಮಕ್ಕಳಿದ್ದಾರೆ. ಕಳೆದ 6 ತಿಂಗಳಿನಿ0ದ ಪತ್ನಿಯ ಅನೈತಿಕ ಸಂಬಂಧದ ವಿಚಾರವಾಗಿ ರವಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಅನೇಕ ಬಾರಿ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಸಂಧಾನ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರು.
ಆದರೆ, ರವಿಗೆ ಸೌಮ್ಯಳ ಮೇಲಿನ ಸಂಶಯ ಮಾತ್ರ ಹೋಗಲಿಲ್ಲ. ರವಿ ಕಳೆದ ರಾತ್ರಿ ಮನೆಯಲ್ಲಿ ಮಕ್ಕಳೆಲ್ಲ ಮಲಗಿರುವಾಗ ಸೌಮ್ಯಳ ಕುತ್ತಿಗೆಯ ಮೇಲೆ ಕಾಲು ಅದುಮಿ ಉಸಿರು ಗಟ್ಟಿಸಿಕೊಂದಿರುವ ಆರೋಪ ಕೇಳಿಬಂದಿದೆ. ಇದಕ್ಕೂ ಮುನ್ನ ಉಸಿಗಟ್ಟಿಸಿದಾಗ ಪತ್ನಿ ಮೃತಪಟ್ಟಿಲ್ಲವೇನೋ ಅಂದುಕೊಂಡು ವೇಲ್ನಿಂದ ಬಿಗಿದು ಸಾಯಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣವನ್ನು ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ರವಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.