ಉತ್ತರಕನ್ನಡ: ಮನೆಯಿಂದ ನಾಪತ್ತೆಯಾಗಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಲು ಕಾಡಿನಲ್ಲಿ ಕೈ ಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ನಡೆದಿದೆ.
ಯಲ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಬುಧವಾರ ಸಂಜೆ ಶಾಲೆಯಿಂದ ಮಾಗೋಡ ಬಸ್ನಲ್ಲಿ ಮನೆಗೆ ಹೊರಟು, ನಂದೊಳ್ಳಿಯಲ್ಲಿ ಇಳಿದಿದ್ದಳು. ಆದರೆ, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಯಾರೋ ಅಪಹರಿಸಿರಬಹುದೆಂದು ಯಲ್ಲಾಪುರ ಠಾಣೆಯಲ್ಲಿ ಕುಟುಂಬವರು ದೂರು ನೀಡಿದ್ದರು.
ಸಂಜೆಯಿಂದ ರಾತ್ರಿಯವರೆಗೆ ಗ್ರಾಮಸ್ಥರೆಲ್ಲ ಸೇರಿ ಹುಡುಕಿದರೂ ವಿದ್ಯಾರ್ಥಿನಿ ಪತ್ತೆಯಾಗಿರಲಿಲ್ಲ. ಮಧ್ಯರಾತ್ರಿ ಮನೆಯ ಸಮೀಪದ ಕಾಡಿನಲ್ಲಿ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಯಾವುದೇ ಅಪಾಯವಾಗಿಲ್ಲ.
ಇನ್ನು ಬೈಕ್ನಲ್ಲಿ ಬಂದ ಮೂವರು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಅಪಹರಿಸಿದ್ದರು ಎಂದು ಆಕೆ ಹೇಳಿದ್ದಾಳೆ. ರಾತ್ರಿ ವೇಳೆ ಕೈಕಾಲು ಕಟ್ಟಿ ಮನೆಯ ಬಳಿಯ ಕಾಡಿನಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿಕೆ ನೀಡಿದ್ದು, ಬೈಕ್ನಲ್ಲಿ ಬಂದವರು ಯಾರು? ಎಂದು ಪತ್ತೆಯಾಗಬೇಕು.
ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ನ್ನು ಡಿವೈಎಸ್ಪಿ ರವಿ ನಾಯ್ಕ್, ಪಿಐ ಸುರೇಶ ಯಳ್ಳೂರ ಹಾಗೂ ಪಿಎಸ್ಐ ಮಂಜುನಾಥ ಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಬುಧವಾರ ಸಂಜೆ ವೇಳೆ ಬೈಕ್ ನಲ್ಲಿ ವಿದ್ಯಾರ್ಥಿಯನ್ನು ಯಾರೋ ಮಾಗೋಡ ಕಡೆ ಕರೆದೊಯ್ಯುವುದನ್ನು ನೋಡಿರುವುದಾಗಿ ಕೆಲ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.