
ಬೆಳ್ತಂಗಡಿ : ದಿಡುಪೆಯ ಜಲಪಾತ ನೋಡಲು ಮಂಗಳೂರಿನಿಂದ ಬಂದಿದ್ದ ಯುವತಿಯನ್ನು ರಸ್ತೆಯಲ್ಲಿ ತಡೆದು ಜೀವಬೆದರಿಕೆ ಹಾಕಿರುವ ಬಗ್ಗೆ ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರಿನಿಂದ ಯುವತಿ ತನ್ನ ಸ್ನೇಹಿತ ಫರ್ಹಾನ್ ನೊಂದಿಗೆ ಬೈಕ್ ಮೂಲಕ ಜಲಪಾತ ನೋಡಲು ಜು.12 ರಂದು ಬೆಳ್ತಂಗಡಿ ತಾಲೂಕಿನ ದಿಡುಪೆಗೆ ಬರುತ್ತಾರೆ. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ಅನುಮತಿ ಪಡೆದು ಜಲಪಾತಕ್ಕೆ ತೆರಳಿ ಹಿಂತಿರುಗಿ ಬಂದ ವೇಳೆ ಯುವತಿಯನ್ನು ತಡೆದ ಸ್ಥಳೀಯ ಯುವಕರ ತಂಡವೊಂದು ನೀನು ಮುಸ್ಲಿಮನೊಟ್ಟಿಗೆ ಯಾಕೆ ಬಂದಿದ್ದೀಯ ನಿನಗೆ ಹಿಂದೂಗಳು ಆಗುವುದಿಲ್ಲವಾ ಎಂದು ಅವಾಚ್ಯವಾಗಿ ನಿಂದಿಸಿ ನಿನ್ನೊಂದಿಗೆ ಬಂದಿದ್ದ ಯುವಕನನ್ನು ಇಲ್ಲಿಗೆ ಕರೆಸು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.
ನೊಂದ ಯುವತಿಯ ದೂರಿನಂತೆ ಬೆಳ್ತಂಗಡಿ ತಾಲೂಕಿನ ದಿಡುಪೆ ನಿವಾಸಿಗಳಾದ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಹಾಗೂ ಇತರರ ವಿರುದ್ದ ಭಾರತೀಯ ದಂಡ ಸಂಹಿತೆ 126(2), 352, 351(2) ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


