ಮಂಡ್ಯ: ನಾಗಮಂಗಲ ತಾಲೂಕಿನಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಸಹೋದರರಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.
ನಾಗಮಂಗಲದ ಸೋಮನಹಳ್ಳ ಅಮ್ಮನವರ ದೇವಸ್ಥಾನದ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾಷಣದ ವೇಳೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಮನೆಯಲ್ಲಿ ಸಮಾವೇಶ ವೀಕ್ಷಣೆ ಮಾಡುತ್ತಿರುವ ವೀಡಿಯೋ ಪ್ರಸಾರ ಮಾಡಲಾಗುತ್ತಿತ್ತು.
ಅನಾರೋಗ್ಯದ ಕಾರಣ ಸಮಾವೇಶಕ್ಕೆ ಗೈರಾಗಿದ್ದ ದೇವೇಗೌಡರು ಮನೆಯಲ್ಲಿಯೇ ಆನ್ ಲೈನ್ ಮೂಲಕ ಸಮಾವೇಶ ವೀಕ್ಷಣೆ ಮಾಡುತ್ತಿದ್ದರು.
ಕುಮಾರಸ್ವಾಮಿ ಭಾಷಣವನ್ನು ದೇವೇಗೌಡರು ವೀಕ್ಷಣೆ ಮಾಡುತ್ತಿರುವುದನ್ನು ನೋಡಿ ಭಾಷಣ ನಿಲ್ಲಿಸಿ ಕುಮಾರಸ್ವಾಮಿ ಕಣ್ಣೀರು ಹಾಕಿದರು.
ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕುಮಾರಸ್ವಾಮಿ ಅವರನ್ನು ಸಮಾಧಾನಪಡಿಸಿದರು.
ಇದೇ ವೇಳೆ ಸಮಾವೇಶದ ವೇದಿಕೆಯಲ್ಲಿ ಕುಳಿತಿದ್ದ ಶಾಸಕ ಹೆಚ್.ಡಿ. ರೇವಣ್ಣ ಕೂಡಾ ಕಣ್ಣೀರು ಹಾಕಿದರು.