ಬೆಂಗಳೂರು: ಜನರನ್ನು ಯಾಮಾರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಮಹಿಳಾ ಕ್ರೈಂ ರಿಪೋರ್ಟರ್ ಜಯನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಭವಾನಿ ಬಂಧಿತೆ. ಈಕೆ, ‘ನಾನು ಮಾಧ್ಯಮವೊಂದರಲ್ಲಿ ಕ್ರೈಂ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ’ ಎಂದು ರುಕ್ಮಿಣಿ ಎಂಬುವವರಿಗೆ ನಂಬಿಸಿ ಅವರ ಹಣಕಾಸು ವ್ಯವಹಾರಕ್ಕೆ ನೆರವಾಗುವುದಾಗಿ ಹೇಳಿ 2 ಲಕ್ಷ ರೂ. ಕಮಿಷನ್ ಪಡೆದು ವಂಚಿಸಿದ್ದಾಳೆ. ಈ ಬಗ್ಗೆ ಹಣ ಕಳೆದುಕೊಂಡ ಮಹಿಳೆಯು ಭವಾನಿ ವಿರುದ್ಧ ದೂರು ನೀಡಿದ್ದಾರೆ.
ಜಯನಗರ ನಿವಾಸಿ ರುಕ್ಮಿಣಿ ಎಂಬುವವರು ತನ್ನ ಮನೆ ಮಾರಿದ್ದ ಹಣವನ್ನು ಪರಿಚಯಸ್ಥರಿಗೆ ಸಾಲ ನೀಡಿದ್ದರು. ದಿನಕಳೆದಂತೆ ರುಕ್ಮಿಣಿಗೆ ಸಾಲ ವಾಪಸ್ ಬಂದಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ 6 ಲಕ್ಷ ರೂ. ವಸೂಲಿ ಕಷ್ಟವಾಗಿತ್ತು. ಹಣ ಕೊಡದೆ ಸತಾಯಿಸುತ್ತಿದ್ದರು. ಈ ವಿಷಯ ಅರಿತ ಭವಾನಿ, ‘ನನಗೆ ಪೊಲೀಸರು ಗೊತ್ತು. ಅವರಿಂದಲೇ ಕರೆ ಮಾಡಿಸಿ ಹಣ ವಾಪಸ್ ಕೊಡಿಸುವೆ’ ಎಂದು ನಂಬಿಸಿದ್ದಳು. ಅಲ್ಲದೆ ‘ನಿನಗೆ ಬರಬೇಕಿರುವ 6 ಲಕ್ಷ ರೂ.ಅನ್ನು ಸಾಲಗಾರರಿಂದ ಕೊಡಿಸಲು ನನಗೆ 2 ಲಕ್ಷ ರೂ. ಅನ್ನು ಮುಂಗಡವಾಗಿ ಕಮಿಷನ್ ಕೊಡಬೇಕು’ ಎಂದು ಕಂಡಿಷನ್ ಕೂಡ ಹಾಕಿದ್ದಳು. ಹೇಗೋ ಬಂದಷ್ಟು ಹಣ ಬಂದರೆ ಸಾಕಪ್ಪ ಎಂಬ ಸ್ಥಿತಿಯಲ್ಲಿದ್ದ ರುಕ್ಮಿಣಿ, ಭವಾನಿಗೆ 2 ಲಕ್ಷ ರೂ. ಕೊಟ್ಟಿದ್ದರು.
ನಂತರ ರುಕ್ಮಿಣಿಗೆ ಬರಬೇಕಿದ್ದ ಸಾಲವನ್ನು ಭವಾನಿ ವಸೂಲಿ ಮಾಡಿಸಿ ಕೊಡಲಿಲ್ಲ. ಕೊನೆಗೆ 2 ಲಕ್ಷ ರೂ. ಕಮಿಷನ್ ಹಣವನ್ನೂ ರುಕ್ಮಿಣಿಗೆ ಹಿಂತಿರುಗಿಸಲಿಲ್ಲ. ಕೊನೆಗೆ ಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ ರುಕ್ಮಿಣಿಗೆ ಗೊತ್ತಾಯ್ತು ಭವಾನಿ ಪತ್ರಕರ್ತೆ ಅಲ್ಲ, ಸುಳ್ಳು ಹೇಳಿದ್ದಾಳೆಂದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಕಲಿ ವರದಿಗಾರ್ತಿಯನ್ನು ಬಂಧಿಸಿದ್ದಾರೆ.