Tuesday, June 23, 2026
Homeತಾಜಾ ಸುದ್ದಿಸಾಮಾಜಿಕ ಜಾಲತಾಣ ನಂಬಿ ಚುನಾವಣೆ ಮಾಡಲ್ಲ; ಗೀತಾ ವಿರುದ್ಧದ ಅಪಪ್ರಚಾರಕ್ಕೆ ಮಧು ಬಂಗಾರಪ್ಪ ಕಿಡಿ

ಸಾಮಾಜಿಕ ಜಾಲತಾಣ ನಂಬಿ ಚುನಾವಣೆ ಮಾಡಲ್ಲ; ಗೀತಾ ವಿರುದ್ಧದ ಅಪಪ್ರಚಾರಕ್ಕೆ ಮಧು ಬಂಗಾರಪ್ಪ ಕಿಡಿ

- Advertisement -
- Advertisement -

ಶಿವಮೊಗ್ಗ: ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ಚುನಾವಣೆಗೆ ನಿಲ್ಲಲು ಗೀತಾ ಶಿವರಾಜಕುಮಾರ್‌ಗೆ ಏನು ಅರ್ಹತೆ ಇದೆ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಹಾಗಿದ್ದರೆ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಬಿ.ವೈ.ರಾಘವೇಂದ್ರ ಅವರಿಗೆ ಏನು ಅರ್ಹತೆ ಇತ್ತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.

ಚುನಾವಣೆಯನ್ನು ಸಾಮಾಜಿಕ ಜಾಲತಾಣ ನಂಬಿಕೊಂಡು ಮಾಡಲಾಗುವುದಿಲ್ಲ. ಅದನ್ನೆಲ್ಲ ಕಸದ ಬುಟ್ಟಿಗೆ ಹಾಕಿ. ಗೀತಾ ಶಿವರಾಜ ಕುಮಾರ್ ಅವರು ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಗೆಲುವು ನಮ್ಮದೇ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಗೀತಾ ಶಿವರಾಜ್ ಕುಮಾರ್ ಗೆಲುವು ನಿಶ್ಚಿತ. ಈ ಹಿಂದೆ ಗೀತಕ್ಕ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ನಾನು ಕೂಡ ಸ್ಪರ್ಧೆ ಮಾಡಿದ್ದೆ. ಆಗ ವಾತಾವರಣ ಪೂರಕವಾಗಿರಲಿಲ್ಲ. ಆದರೂ ಸಾಕಷ್ಟು ಮತಗಳು ಬಿದ್ದಿದ್ದವು. ಆದರೆ, ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿರುವುದರಿಂದ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ರಾಗಿಗುಡ್ಡದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ತಡೆದಿದ್ದೇವೆ. ಇಂತಹ ಘಟನೆಗಳನ್ನೇ ಬಿಜೆಪಿಯವರು ಬಂಡವಾಳ ಮಾಡಿಕೊಳ್ಳುತ್ತಾರೆ. ಶರಾವತಿ ಸಂತ್ರಸ್ತರಿಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡಲು ಸಾಧ್ಯವಾಗದ ಸಂಸದರು ಈಗ ಡಿಜಿಟಲ್ ಬ್ಯಾನರ್‌ ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.

ಪ್ರಮುಖರಾದ ಆರ್.ಎಂ. ಮಂಜುನಾಥ ಗೌಡ, ರಮೇಶ ಶಂಕರಘಟ್ಟ, ಜಿ.ಡಿ.ಮಂಜುನಾಥ್, ಎಚ್.ಸಿ. ಯೋಗೀಶ್, ಎನ್‌.ಪಿ. ಧರ್ಮರಾಜ್, ಎಸ್.ಕೆ.ಮರಿಯಪ್ಪ, ರಮೇಶ್, ವಿಜಯ್‌ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!