ಹೊಸದಿಲ್ಲಿ: ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡುವಾಗ ಜಾಗ್ರತೆ ವಹಿಸುವಂತೆ ತನ್ನ ವಕ್ತಾರರಿಗೆ ಆಡಳಿತಾರೂಢ ಬಿಜೆಪಿ ಸೂಚನೆ ನೀಡಿದೆ. ಕಳೆದ ವಾರ ಪ್ರವಾದಿ ಮಹಮ್ಮದ್ ಕುರಿತಾಗಿ ಪಕ್ಷದ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಟಿವಿ ಚರ್ಚೆಯಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಯು, ಇಸ್ಲಾಮಿಕ್ ದೇಶಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ರಾಜತಾಂತ್ರಿಕ ಮತ್ತು ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅದನ್ನು ಸರಿಪಡಿಸಲು ಬಿಜೆಪಿ ಈಗ ಹರಸಾಹಸ ಪಡುತ್ತಿದೆ.
ಬಿಜೆಪಿ ಆಂತರಿಕವಾಗಿ ತನ್ನ ಎಲ್ಲ ವಕ್ತಾರರಿಗೆ ಅನೌಪಚಾರಿಕ ಸಲಹೆ ನೀಡಿದೆ. ಬಹಳ ಎಚ್ಚರಿಕೆಯಿಂದ ಅಳೆದು ತೂಗಿದ ಭಾಷೆ ಬಳಸುವಂತೆ, ಯಾವುದೇ ಧರ್ಮ, ಧಾರ್ಮಿಕ ವ್ಯಕ್ತಿ ಅಥವಾ ಸಂಕೇತಗಳ ಬಗ್ಗೆ ಟೀಕೆ ಮಾಡುವುದರಿಂದ ದೂರ ಇರುವಂತೆ ಮತ್ತು ಟೆಲಿವಿಷನ್ ಚರ್ಚೆಗಳಲ್ಲಿ ಪ್ರಚೋದಿತರಾಗಿ ಪಕ್ಷದ ಧ್ಯೇಯಗಳನ್ನು ಉಲ್ಲಂಘಿಸದಂತೆ ಸೂಚನೆ ನೀಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ. ಹಾಗೆಯೇ ಮಾಧ್ಯಮ ಸಂವಾದಗಳಲ್ಲಿ ಅಧಿಕಾರ ನೀಡಿರುವ ನಾಯಕರು ಮಾತ್ರವೇ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಅವರನ್ನು ಪಕ್ಷದ ಮಾಧ್ಯಮ ಘಟಕ ನಿಯೋಜಿಸಲಿದೆ. ಚರ್ಚೆ ಕಾವು ಪಡೆದ ಸಂದರ್ಭದಲ್ಲಿ ಲಕ್ಷ್ಮಣ ರೇಖೆ ದಾಟದಂತೆ ಬಿಜೆಪಿ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಕೆರಳಬಾರದು ಮತ್ತು ಉದ್ವಿಗ್ನರಾಗಿ ಹೇಳಿಕೆ ನೀಡುವುದರಿಂದ ಭಾಷೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ