ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯನವರು ಆರೆಸ್ಸೆಸ್ ಚಡ್ಡಿ ಬಗ್ಗೆ ಹಗುರವಾಗಿ ಮಾತನಾಡಿರೋದು ಬಿಜೆಪಿ ನಾಯಕರ ಪಿತ್ತ ನೆತ್ತಿಗೇರಿಸಿದೆ. ಹಾಗಾಗಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಒಬ್ಬರಾದ ಮೇಲೆ ಒಬ್ಬರು ಹೇಳಿಕೆ ಕೊಡುತ್ತಿದ್ದಾರೆ. ಇವತ್ತು ಕೂಡಾ ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡ್ರು. ಆರೆಸ್ಸೆಸ್ ಚಡ್ಡಿಯ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಉಡುಪಿಯಲ್ಲಿ ಹಳೆಯ ಚಡ್ಡಿಗಳ ಸಂಗ್ರಹ ಮಾಡಿ ಅದನ್ನ ಬೆಂಗಳೂರಿಗೆ ಕೊರಿಯರ್ ಮಾಡ್ತೇವೆ ಅಂತ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಹಾಗೇಯೇ ನಾವು ಕಳುಹಿಸಿದ ಚಡ್ಡಿಗಳನ್ನು ಸಿದ್ದರಾಮಯ್ಯ ನಲಪಾಡ್ ಸುಡಲಿ. ಆರೆಸ್ಸೆಸ್ ಚಡ್ಡಿಯ ತಾಕತ್ತು ಏನೂ ಅಂತ ಕಾಂಗ್ರೆಸ್ ಗೆ ಗೊತ್ತಿಲ್ಲ. ಚಡ್ಡಿಯ ವಿಚಾರಕ್ಕೆ ಬಂದರೆ ಕರ್ನಾಟಕದಿಂದಲೇ ಕಾಂಗ್ರೆಸ್ ನ ಅಂತಿಮಯಾತ್ರೆ ಆರಂಭವಾಗುತ್ತೆ ಅಂದ್ರು.. ನಾಳೆ ಸಂಜೆ ಉಡುಪಿ ಜಿಲ್ಲೆಯಿಂದ ಹಳೆಯ ಚಡ್ಡಿಗಳನ್ನು ಕಳುಹಿಸುತ್ತೇವೆ. ನಾವು ಹೊಸ ಚಡ್ಡಿಗಳನ್ನು ಕಾಂಗ್ರೆಸ್ಸಿಗೆ ಕೊಡುವುದಿಲ್ಲ. ಸಿದ್ದರಾಮಯ್ಯ ನಲಪಾಡ್ ಅದನ್ನು ಸುಡಲಿ. ಕೊನೆಗೊಂದು ದಿನ ಅವರಿಗೆ ಚಡ್ಡಿ ಹಾಕಲು ಗತಿ ಇರೋದಿಲ್ಲ ,ಅದು ಗ್ಯಾರಂಟಿ.ನಾವು ಆರೆಸ್ಸೆಸ್ ನ ಖಾಕಿ ಚಡ್ಡಿ ಕಳುಹಿಸುವುದಿಲ್ಲ.ನಮ್ಮ ಜನ ಬಳಸದೆ ಇರುವ ಚಡ್ಡಿಗಳನ್ನು ಕಳಿಸ್ತೇವೆ. ಬಳಸಲು ಯೋಗ್ಯ ಇಲ್ಲದ ಚಡ್ಡಿಗಳನ್ನು ಕಳಿಸುತ್ತೇವೆ ಎಂದು ಹೇಳಿದ್ದಾರೆ.