ಲಕ್ನೋ : ಉತ್ತರಪ್ರದೇಶದ ಲಕ್ನೋದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಕೊರೊನಾ ಸೋಂಕಿತನೊಬ್ಬ ಕೇವಲ ಒಂದು ಪಾನ್ ಮಸಾಲಕ್ಕಾಗಿ ಒಂದು ದೊಡ್ಡ ಯಡವಟ್ಟೇ ಮಾಡಿ ಎಲ್ಲರನ್ನೂ ಆತಂಕ್ಕಕೆ ತಳ್ಳಿದ್ದಾನೆ.
ಆಗ್ರಾದ ಎಸ್ ಎನ್ ಮೆಡಿಕಲ್ ಕಾಲೇಜಿನಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ. ಪಾನ್ ಮಸಾಲ ತಿನ್ನುವ ಬಯಕೆಯಿಂದ ಕೊರೋನಾ ಸೋಂಕಿತನೊಬ್ಬ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಅಲ್ಲದೇ, ತನ್ನ ಕುಟುಂಬದವರನ್ನೆಲ್ಲಾ ಭೇಟಿ ಮಾಡಿ ಆತಂಕ ಸೃಷ್ಟಿಸಿದ್ದಾನೆ.
ಆಸ್ಪತ್ರೆಯಿಂದ ತಪ್ಪಿಸಿಕೊಂಡ ವ್ಯಕ್ತಿ ಹಾಗೋ ಹೀಗೋ ಪಾನ್ ಮಸಾಲ ಖರೀದಿಸಿ ತನ್ನ ಪಾಕೆಟ್ ನಲ್ಲಿ ತುಂಬಿಕೊಂಡಿದ್ದ. ಬಳಿಕ ತನ್ನ ಗೆಳೆಯರು, ಕುಟುಂಬಸ್ಥರ ಮನೆಗೆ ಭೇಟಿ ನೀಡಿದ್ದ. ಮೊದಲಿಗೆ ಅವರಿಗೆ ಈತನಿಗೆ ಕೊರೋನಾ ಇರುವ ವಿಚಾರ ಗೊತ್ತಿರಲಿಲ್ಲ. ಹೀಗಾಗಿ ಅವರೂ ಆತನನ್ನು ಸ್ವಾಗತಿಸಿದ್ದರು. ಆದರೆ ಬಳಿಕ ತನಗೆ ಕೊರೋನಾ ಇದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮನೆಯವರಿಗೆ ಮನವಿ ಮಾಡಿದ್ದ.
ಇದೀಗ ಆತನನ್ನು ಮತ್ತೆ ಪತ್ತೆ ಮಾಡಿರುವ ಎಸ್ಎನ್ ಮೆಡಿಕಲ್ ಕಾಲೇಜು ಅಧಿಕಾರಿಗಳು ಆತನನ್ನು ಐಸೋಲೇಷನ್ ವಾರ್ಡ್ ನಲ್ಲಿರಿಸಿದ್ದು, ಆತನ ಮೇಲೆ ಹದ್ದಿನಗಣ್ಣಿರಿಸಿದ್ದಾರೆ. ಈಗ ಆತನ ಕುಟುಂಬದವರನ್ನೂ ಕ್ವಾರಂಟೈನ್ ಗೊಳಪಡಿಸಲಾಗಿದೆ.