ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ ಮಹೋತ್ಸವ’ ಶುಕ್ರವಾರ ಸಂಪನ್ನಗೊಂಡಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ಪುಷ್ಕರಿಣಿಯಲ್ಲಿ ಗಣಪತಿ, ನವದುರ್ಗೆಯರು, ಆದಿಶಕ್ತಿ ಸಹಿತ ಶ್ರೀ ಶಾರದಾ ಮಾತೆಯ ಮೂರ್ತಿಗಳ ವಿಸರ್ಜನೆ ನೆರವೇರಿತು.
ಶುಕ್ರವಾರ ಬೆಳಗ್ಗೆ ವಾಗೀಶ್ವರಿ ದುರ್ಗಾ ಹೋಮ, ಮಧ್ಯಾಹ್ನ ಶಿವಪೂಜೆ, ಪುಷ್ಪಾಲಂಕಾರ ಮಹಾ ಪೂಜೆ ನೆರವೇರಿತು. ರಾತ್ರಿ ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಬಳಿಕ ಶ್ರೀ ಶಾರದಾ ಮಾತೆಯ ಮೂರ್ತಿಗಳ ವಿಸರ್ಜನೆ ನಡೆದು ಅವಭೃಥ ಸ್ನಾನ ನಡೆಯಿತು. ಅ. 16ರಂದು ರಾತ್ರಿ 7 ರಿಂದ 8 ಗಂಟೆಯ ವರೆಗೆ ಭಜನೆ, ರಾತ್ರಿ 7.30ಕ್ಕೆ ಗುರುಪೂಜೆ ನಡೆಯಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ವರ್ಣರಂಜಿತ ಮೆರವಣಿಗೆ ಇರಲಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ ನಡೆಸಲಾಯಿತು.
ಸಂಜೆ ವಿವಿಧ ತಂಡಗಳಿಂದ ನಡೆದ ಹುಲಿ ವೇಷ ಸೇವೆ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ಈ ಬಾರಿ ದಸರಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು.
ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ, ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್., ವಿಧಾನಪರಿಷತ್ ಸದಸ್ಯಹರೀಶ್ ಕುಮಾರ್, ಕಿಯೋನಿಕ್ಸ್ ಅಧ್ಯಕ್ಷಹರಿಕೃಷ್ಣ ಬಂಟ್ವಾಳ, ದೇವಸ್ಥಾನದ ಟ್ರಸ್ಟಿಗಳಾದ ರವಿಶಂಕರ ಮಿಜಾರು, ಕೆ. ಮಹೇಶ್ಚಂದ್ರ, ಎಂ. ಶೇಖರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ, ದೇವಸ್ಥಾನದ ಅಭಿವೃದ್ಧಿಮಂಡಳಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ| ಅನಸೂಯ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷ ಡಾ| ಬಿ.ಜಿ. ಸುವರ್ಣ, ಸದಸ್ಯರಾದ ವೇದ ಕುಮಾರ್, ಜಯ ವಿಕ್ರಮ್, ರಾಧಾಕೃಷ್ಣ, ಎಚ್.ಎಸ್. ಜೈರಾಜ್, ಶೈಲೇಂದ್ರ ಸುವರ್ಣ, ರಮಾನಾಥ್ ಕರಂದೂರು, ಲೀಲಾಕ್ಷ ಕರ್ಕೇರ, ಸೂರ್ಯಕಾಂತ್ ಜೆ. ಸುವರ್ಣ, ಚಂದನ್ದಾಸ್, ಗೌರವಿ ಪಿ.ಕೆ.,ಕಿಶೋರ್ ದಂಡೆಕೇರಿ ಉಪಸ್ಥಿತರಿದ್ದರು.