ಅಫಜಲಪುರ: ಪಕ್ಷವನ್ನು ಮೀರಿ ಪ್ರೀತಿ ಗೆದ್ದಿರುವ ಘಟನೆಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ನಡೆದಿದೆ. ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ತಮ್ಮ ರಾಜಕೀಯವನ್ನು ಮೀರಿ ಇಬ್ಬರೂ ಕೂಡಾ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ಇಂದು ನಡೆದ ಸರಳ ವಿವಾಹದಲ್ಲಿ ದಂಪತಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಫಜಲಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರುಕ್ಮಿಣಿ ಜಮಾದಾರ್ ಮತ್ತು ತಾಲೂಕು ಪಂಚಾಯತ್ ಉಪಾಧ್ಯಕ್ಷ್ಯ ಭೀಮಾಶಂಕರ್ ಹೊನ್ನಿಕೇರಿ ಇಂದು ವಿವಾಹವಾಗಿರುವ ನವಜೋಡಿ.
ವಧು ರುಕ್ಮಿಣಿ ಜಮಾದಾರ್ ಬಿಜೆಪಿ ಬೆಂಬಲದಿಂದ ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದು, ಹಾಗೆಯೇ ವರ ಭೀಮಾಶಂಕರ್ ಹೊನ್ನಿಕೇರಿ ಕಾಂಗ್ರೆಸ್ ನಿಂದ ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿದ್ದರು. ತಾಲೂಕು ಪಂಚಾಯತ್ ನಲ್ಲಿ ಮೈತ್ರಿ ಇಲ್ಲದಿದ್ದರು ಕೂಡಾ ಇವರಿಬ್ಬರು ಜೀವನದ ಪಯಣದಲ್ಲಿ ಮೈತ್ರಿ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಾಲೂಕಿನ ಬೇರೆ ಬೇರೆ ಕ್ಷೇತ್ರಗಳಿಂದ ತಾಲೂಕು ಪಂಚಾಯತ್ ಸಧಸ್ಯರಾಗಿದ್ದ ಇವರು ತಾಲೂಕು ಪಂಚಾಯತ್ ಸಭೆಯಲ್ಲಿ ತಮ್ಮ ತಮ್ಮ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದರು. ತಾಲೂಕು ಪಂಚಾಯತ್ ನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಾದ ಮೇಲೆ ಇವರಿಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಮೂಡಿತ್ತು. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಎರಡು ಕುಟುಂಬದವರು ಮಾತನಾಡಿ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ರು.
ಇಷ್ಟೆಲ್ಲಾ ಆದ್ರು ಕೂಡಾ ತಾಲೂಕಿನ ಜನರಿಗೆ ಇಬ್ಬರು ಮದುವೆಯಾಗ್ತಾರೆ. ಇಬ್ಬರು ಪ್ರೀತಿಸ್ತಾರೆ ಅನ್ನೋದು ಗೊತ್ತಿರಲಿಲ್ಲಾ. ಆದ್ರೆ ಕೆಲ ದಿನಗಳ ಹಿಂದಷ್ಟೇ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಾಗಲೇ ಗೊತ್ತಾಗಿದ್ದು, ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಪ್ರೇಮ ಮೈತ್ರಿಯಾಗಿರೋದು. ಇವರಿಬ್ಬರ ವಿವಾಹಕ್ಕೆ ರಾಜಕೀಯ ನಾಯಕರು ಕೂಡಾ ಶುಭ ಹಾರೈಕೆಗಳನ್ನು ಹೇಳಿದ್ದಾರೆ. ಇನ್ನು ಮೇಲೆ ಕಚೇರಿಯಲ್ಲಿ ಪಕ್ಷ ಬೇರೆಯಾದ್ರು ಕೂಡಾ ಮನೆಯಲ್ಲಿ ಮಾತ್ರ ಇಬ್ಬರದು ಒಂದೇ ಪಕ್ಷವಾಗಿದೆ.