ಬೆಂಗಳೂರು: ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ ಬೆಂಗಳೂರಿನ ಮಹಿಳೆಯೊಬ್ಬರ ಮಗ 6 ವರ್ಷದ ಹಿಂದೆ ಕಳೆದು ಹೋಗಿದ್ದ. ಇದೀಗ ಆಧಾರ್ ಕಾರ್ಡ್ ನಿಂದಾಗಿ ಮಗ ಮತ್ತೆ ತಾಯಿಯ ಮಡಿಲು ಸೇರಿದ್ದಾನೆ.
ಹೌದು.. 2016ರ ಮಾರ್ಚ್ ನಲ್ಲಿ ಪಾರ್ವತಮ್ಮ ಎಂಬುವರು, ತನ್ನ ಮಗ ಭರತ್ ಕುಮಾರ್ ಎಂಬಾತನನ್ನು ಕರೆದುಕೊಂಡು ಯಲಹಂಕದ ರೈತ ಸಂತೆಗೆ ತೆರಳಿದ್ದರು. ಮೂಗನಾಗಿದ್ದ ಭರತ್ ದಿಢೀರ್ ನಾಪತ್ತೆಯಾಗಿದ್ದನ. ಸಂತೆ ಪೂರ್ತಿ ಹುಡುಕಿದ್ರೂ ಮಗ ಸಿಗದೇ ಇದ್ದಾಗ, ಯಲಹಂಕ ಠಾಣೆಗೆ ತೆರಳಿ, ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಮಗನ ನಿರೀಕ್ಷೆಯಲ್ಲಿ ತಾಯಿ ಎದುರು ನೋಡುತ್ತಿದ್ದರು.
ಇಲ್ಲಿಂದ ತಪ್ಪಿಸಿಕೊಂಡು ಹೋದ ಭರತ್ ರೈಲು ಮೂಲಕ ನಾಗ್ಬುರ ಸೇರಿದ್ದನು. ರೈಲ್ವೆ ನಿಲ್ದಾಣದಲ್ಲಿ ಓಡಾಡುತ್ತಿದ್ದಂತ ಪೊಲೀಸರು ಆತನನ್ನು ರಕ್ಷಿಸಿ, ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದನು.
ಪುನರ್ವಸತಿ ಕೇಂದ್ರದ ಅಧಿಕಾರಿಗಳು ಆತನಿಗೆ ಅನಿಲ್ ಮರಾಠೆ ಎಂದು ಹೆಸರು ಕೂಡ ಇಟ್ಟಿದ್ದರು. 6 ವರ್ಷದ ಬಳಿಕ, 2022ರಲ್ಲಿ ಅನಿಲ್ ಮರಾಠೆಗೆ ಆಧಾರ್ ಕಾಡ್ ಮಾಡಿಸೋದಕ್ಕಾಗಿ, ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ, ಮಾಹಿತಿ ನೀಡಿ, ಬಂದಿದ್ದಾರೆ. ಆದ್ರೆ ಅವರು ಸಲ್ಲಿಸಿದ್ದಂತ ಹೊಸ ಆಧಾರ್ ಕಾರ್ಡ್ ರಿಜೆಕ್ಟ್ ಆಗಿತ್ತು.
ಇದಕ್ಕೆ ಕಾರಣವೇನು ಎಂಬುದಾಗಿ ಪುನರ್ವಸತಿ ಕೇಂದ್ರದವರು ಆಧಾರ್ ಸೇವಾ ಕೇಂದ್ರದವರನ್ನು ಕೇಳಿದಾಗ, ಇವರ ದತ್ತಾಂಶದಲ್ಲಿ ಈಗಾಗಲೇ ಬಿ ಭರತ್ ಕುಮಾರ್ ಎಂದು ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಇದೆ ಎಂದು ತಿಳಿಸಿದ್ದಾರೆ. ಅಲ್ಲದೇ ಭರತ್ ಕುಮಾರ್ ತಾಯಿಯ ಮೊಬೈಲ್ ಸಂಖ್ಯೆ ಕೂಡ ನೀಡಿದ್ದಾರೆ.
ಕೂಡಲೇ ಜಾಗೃತರಾದಂತ ಅವರು, ಅವರ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ. ಜೊತೆಗೆ ಈ ಬಗ್ಗೆ ಯಲಹಂಕದ ಠಾಣೆ ಪೊಲೀಸರನ್ನು ಸಂಪರ್ಕಿಸಿದಾಗ, ಭರತ್ ಕುಮಾರ್ ಕಿಡ್ನಾಪ್ ಪ್ರಕರಣ ದಾಖಲಾಗಿರುವ ಬಗ್ಗೆ ಇನ್ಸ್ ಪೆಕ್ಟರ್ ಬಿ.ಸತ್ಯನಾರಾಯಣ ಹರಿಯಬ್ಬ ತಿಳಿಸಿದ್ದಾರೆ. ಜೊತೆಗೆ ಭರತ್ ಕುಮಾರ್ ತಾಯಿಯನ್ನು ನಾಗ್ಬುರಕ್ಕೆ ಪೊಲೀಸರೊಂದಿಗೆ ಕಳುಹಿಸಿಕೊಟ್ಟು ನೆರವಾಗಿದ್ದಾರೆ.
ನಾಗ್ಪುರದ ಪುನರ್ ವಸತಿ ಕೇಂದ್ರಕ್ಕೆ ತೆರಳಿದಂತ ಭರತ್ ತಾಯಿ ಪಾರ್ವತಮ್ಮ, ಮಗನನ್ನು ಕಂಡು ಭಾವುಕರಾಗಿದ್ದಾರೆ. ಬಿಕ್ಕಿ ಬಿಕ್ಕಿ ಅತ್ತು, ಮಗನನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ. ಕೊನೆಗೂ 6 ವರ್ಷದ ಬಳಿಕ, ಭರತ್, ಆಧಾರ್ ಕಾರ್ಡ್ ನಿಂದಾಗಿ ತಾಯಿಯ ಮಡಿಲು ಸೇರಿದ್ದಾರೆ.