ಯುವ ಸಾಮ್ರಾಟ್, ಸ್ಯಾಂಡಲ್ವುಡ್ ಯುವನಟ ಚಿರಂಜೀವಿ ಸರ್ಜಾ ನಿಧನರಾಗಿದ್ದು ಎಲ್ಲರಿಗೂ ತೀವ್ರ ದು:ಖ ತಂದಿದೆ. ಇಂದು ಚಿರು ಕುಟುಂಬ ಅವರ 11ನೇ ದಿನದ ಕಾರ್ಯವನ್ನು ಫಾರಂ ಹೌಸ್ನಲ್ಲಿ ನೆರವೇರಿಸಿದೆ.
ಚಿರು ನಿಧನದ ನಂತರ ತಮ್ಮ ಫೇಸ್ಬುಕ್ ಪ್ರೊಫೈಲ್ ಫೋಟೋಗೆ ಕಪ್ಪು ಪೋಟೋ ಹಾಕುವ ಮೂಲಕ ದು:ಖ ವ್ಯಕ್ತಪಡಿಸಿದ್ದ ನಟ ಅರ್ಜುನ್ ಸರ್ಜಾ, ಚಿರು ಬಗ್ಗೆ ಭಾವನಾತ್ಮಕ ಆಡಿಯೋವೊಂದನ್ನು ಮಾಡಿದ್ದಾರೆ.
ನಿನ್ನ ಮನಸ್ಸಿಗೆ ಯಾರಾದರೂ ಬೇಜಾರು ಮಾಡಿದ್ರೆ, ನೀನು ಕೋಪ ಮಾಡಿಕೊಂಡು ಮಾತನಾಡಿದ್ರೆ, ನಮ್ಮನ್ನ ಬೈಕೊಂಡಿದ್ರೆ, ನಮಗೆ ಹೇಳದೆ ಯಾವುದಾದರೂ ಊರಿಗೆ, ಹೋಗಿ ಬಂದಿದ್ರೂ ಪರವಾಗಿರಲಿಲ್ಲ. ಆದರೆ ಮತ್ತೆ ವಾಪಸ್ ಬರಲಾಗದ ಊರಿಗೆ ಹೋಗಿ ನಮಗೆಲ್ಲಾ, ಎಂತಾ ಶಿಕ್ಷೆ ಕೊಟ್ಟು ಬಿಟ್ಟೆಯಪ್ಪಾ. ಕಣ್ಣು ಮುಚ್ಚಿದರೂ ನೀನೆ ಕಣ್ಣು, ತೆರೆದರೂ ನೀನೆ, ನಿನ್ನ ನಗು ಮುಖವನ್ನು ಮರೆಯಲು ಆಗುತ್ತಿಲ್ಲ. ನಿನ್ನನ್ನು ಸ್ವಲ್ಪ ದಿನ ಆದ ಮೇಲೆ ಮರೆತು ಬಿಡ್ತಾರೆ ಎಂದು ನೀನು ತಿಳಿದುಕೊಂಡಿದ್ರೆ ಅದು ಸುಳ್ಳು.
ನಮ್ಮೆಲ್ಲರಿಗೂ ಇದು ದೊಡ್ಡ ಗಾಯ. ಆರದೆ ಇರುವ ಗಾಯ ಇದು. ನೀನು ಯಾವಾಗಲೂ ನಮ್ಮ ಹೃದಯದಲ್ಲೇ ಇರುತ್ತೀಯ ಕಂದ. ನಿನ್ನ ತಾತ ನಿಂಗೆ ಚಿರಂಜೀವಿ ಅಂತಾ ಹೆಸರಿಟ್ಟರು, ಅದ್ಯಾವತ್ತು ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗಲೂ ಚಿರಂಜೀವಿಯಾಗೇ ಇರುತ್ತದೆ ಬಂಗಾರ’.
‘ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡಬೇಕು ಅಂತ ಎಲ್ಲರೂ ಹೇಳ್ತಾರೆ. ಆದರೆ ಅದು ನಿನ್ನ ಕೈಯಲ್ಲೇ ಇದೆ. ಹೇಗೆ ಅಂದರೆ ನೀನು, ಮಗುವಾಗಿ ನಮ್ಮ ಮಡಿಲಿಗೆ ಬಂದು ಬಿಡು ಕಂದ, ಆ ಮಗುವಿನ ನಗುವಿನಲ್ಲೇ ನಾವು ನಿನ್ನ ನೋಡುತ್ತಿವಿ’ ಎಂದು ಅರ್ಜುನ್ ಸರ್ಜಾ ಬಹಳ ಎಮೋಷನಲ್ ಆಗಿ ಬರೆದುಕೊಂಡಿದ್ದಾರೆ.
ಅರ್ಜುನ್ ಸರ್ಜಾ ಮಾತನಾಡಿರುವ ಈ ಆಡಿಯೋ ರೆಕಾರ್ಡನ್ನು ಧ್ರುವಾ ಸರ್ಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಆಡಿಯೋ ಕೇಳಿದವರಿಗೆ ನಿಜಕ್ಕೂ ಅರ್ಜುನ್ ಸರ್ಜಾ ಸೋದರಳಿಯನ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂಬುದು ತಿಳಿಯುತ್ತದೆ.