ಬೆಂಗಳೂರು: ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೋರ್ ಕಮಿಟಿ ಶಿಫಾರಸಿಗೆ ಹೈಕಮಾಂಡ್ ಅಸ್ತು ಎಂದಿದೆ. ಎಂಟಿಬಿ ನಾಗರಾಜ್, ಆರ್ ಶಂಕರ್, ಪ್ರತಾಪ್ ಸಿಂಹ ನಾಯಕ್ ಜೊತೆ ಸುನೀಲ್ ವಲ್ಯಾಪುರೆಗೆ ಟಿಕೆಟ್ ದೊರಕಿದೆ.
ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನ ಕೋರ್ ಕಮಿಟಿ ಶಿಫಾರಸು ಮಾಡಿದಂತೆ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಒಂದು ಸ್ಥಾನವನ್ನು ಮಾತ್ರ ತನ್ನ ವಿವೇಚನೆಯಂತೆ ಅಚ್ಚರಿ ರೀತಿಯಲ್ಲಿ ಪ್ರತಾಪ್ ಸಿಂಹ ನಾಯಕ್ಗೆ ನೀಡಿದೆ.
ಬಿಜೆಪಿಯ ಹಿರಿಯ ಮುಖಂಡ, ದಕ್ಷಿಣ ಕನ್ನಡ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾಗಿರುವ ಪ್ರತಾಪ್ ಸಿಂಹ ನಾಯಕ್ ಸೇವೆ ಸಲ್ಲಿದ್ದರು. ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ನ್ಯಾಯವಾದಿಯಾಗಿ ಹಾಗೂ RSS ನಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇನ್ನುಳಿದಂತೆ ವಿಧಾನ ಪರಿಷತ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಅನರ್ಹ ಶಾಸಕ ಆರ್. ಶಂಕರ್ ಹಾಗೂ ಬಿಎಸ್ ವೈ ಪರಮಾಪ್ತ ಸುನಿಲ್ ವಯ್ಯಾಪುರೆ ಸಫಲರಾಗಿದ್ದಾರೆ.
ಆಪರೇಷನ್ ಕಮಲದ ವೇಳೆಯಲ್ಲಿ ನಡೆದ ಉಪಚುನಾವಣೆಯಲ್ಲಿ ತನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸುನಿಲ್ ವಯ್ಯಾಪುರೆ ಅವರಿಗೆ ಬಿಎಸ್ ಯಡಿಯೂರಪ್ಪ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆಯೇ ಸಿಎಂ ನಡೆದುಕೊಂಡಿದ್ದಾರೆ.
ಆದರೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಸಚಿವರಾಗುವ ಕನಸು ಕಂಡಿದ್ದ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ.
ಇನ್ನು ಕಾಂಗ್ರೆಸ್ 2 ಹಾಗೂ ಜೆಡಿಎಸ್ ಒಂದು ಸ್ಥಾನಕ್ಕಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೂನ್ 29ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.