ಮಂಗಳೂರು: ಜಿಲ್ಲೆಯ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕರಿಂಜೆ, ಗಂಟಾಲ್ಕಟ್ಟೆ, ಕರಲ್ಲಬೆಟ್ಟು, ಮಾರೂರು ಪರಿಸರದಲ್ಲಿ ಕಾಡುಕೋಣವೊಂದು ಕಾಣಿಸಿಕೊಂಡಿದೆ. ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಕರಿಂಜೆಗುತ್ತು ಅಸುಪಾಸಿನಲ್ಲಿ ಕಾಡುಕೋಣ ಕಾಣಸಿಕ್ಕಿತ್ತು. ತಕ್ಷಣ ಸ್ಥಳೀಯರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಅರಣ್ಯ ಇಲಾಖಾ ಅಧಿಕಾರಿಗಳು ಆ ಪರಿಸರದಲ್ಲಿ ದಿನವಿಡೀ ಹುಡುಕಾಡಿದರು ಕಾಣಸಿಕ್ಕಿರಲಿಲ್ಲ. ರಾತ್ರಿ ಸುಮಾರು 9.30ರ ವೇಳೆಗೆ ಕಲ್ಲಬೆಟ್ಟು ಗಂಟಾಲ್ಕಟ್ಟೆ ಚರ್ಚ್ ಬಳಿ ಅಸ್ವಸ್ಥಗೊಂಡ ರೀತಿಯಲ್ಲಿ ಕಾಣಸಿಕ್ಕಿದೆ.
ಆದರೆ, ಈವರೆಗೆ ಈ ಕಾಡುಕೋಣದಿಂದ ಯಾರಿಗೂ ತೊಂದರೆ ಸಂಭವಿಸಿಲ್ಲ ಎಂಬ ವರದಿ ಬಂದಿದೆ.
ಅರಣ್ಯ ಇಲಾಖಾ ಅಧಿಕಾರಿಗಳು ಈ ಕಾಡುಕೋಣವನ್ನು ಹಿಡಿದು ಕಾಡಿಗೆ ಬಿಡುವ ಬಗ್ಗೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಇಡೀ ದಿನದಿಂದ ಸುರಿಯುವ ಮಳೆ ಕೊಂಚ ಅಡ್ಡಿಯಾಗಿದೆ. ಇನ್ನು ಕಾಡುಕೋಣ ಅಶಕ್ತ ಸ್ಥಿತಿಯೊಂದಿಗೆ ಅಲೆದಾಡುತ್ತಿದೆ ಎನ್ನಲಾಗುತ್ತಿದೆ.
ಎಳೆಯ ಹರೆಯದ ಈ ಕಾಡುಕೋಣವು ನಾಲಗೆ ಹೊರಚಾಚಿಕೊಂಡು ತೀರಾ ಅಶಕ್ತ ಸ್ಥಿತಿಯೊಂದಿಗೆ ಅಲೆದಾಡುವಂತಿತ್ತು. ಅಸ್ವಸ್ಥಗೊಂಡ ಕಾಡುಕೋಣಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಸುಧಾರಿಸಿಕೊಂಡ ಬಳಿಕ ಕಾಡುಕೋಣವನ್ನು ಅರಣ್ಯಕ್ಕೆ ಬಿಡಲಾಗುವುದೆಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.