ಸುರತ್ಕಲ್: ಸಾಲದ ಹೊರೆ ತಾಳಲಾರದೆ ಯುವಕನೊಬ್ಬ ತಾನು ಕೆಲಸ ನಿರ್ವಹಿಸುತ್ತಿದ್ದ ಕಚೇರಿಯಲ್ಲೆ ನೇಣು ಬಿಗಿದು ಆಸ್ತ್ಮಹತ್ಯೆ ಮಾಡಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. ಮೃತ ಯುವಕನನ್ನು ಸುಶಾಂತ್ ಜಗ್ಗು (26) ಎಂದು ಗುರುತಿಸಲಾಗಿದೆ.
ಮೂಲ್ಕಿ ಸಮೀಪದ ಪಕ್ಷಿಕೆರೆ ನಿವಾಸಿಯಾಗಿರುವ ಸುಶಾಂತ್ ತಾನು ಕೆಲಸ ಮಾಡುತ್ತಿದ್ದ ಕುಳಾಯಿಯ ಸನ್’ರೈಸ್ ಕಾರ್ಪೋರೇಷನ್ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಾಲದ ಕಾರಣಕ್ಕಾಗಿಯೇ ಸಾವಿಗೆ ಶರಣಾದ ಶಂಕೆ ವ್ಯಕ್ತವಾಗಿದ್ದು, ಡೆತ್ ನೋಟ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.
ಎಲ್ಲರಿಗೂ ಸಾರಿ, ನನಗೆ ಯಾರದ್ದೂ ನಂಬಿಕೆ ಉಳಿಸಲು ಆಗಲಿಲ್ಲ. ಹಣದ ವಿಷಯದಲ್ಲಿ ತೊಂದರೆ ಆಗಿದೆ ಅದಕ್ಕಾಗಿ ಕ್ಷಮಿಸಿ. ಒಂದು ವೇಳೆ ಆನ್ ಲೈನ್ ಲೋನ್ ನೀಡಿದವರು ಕರೆ ಮಾಡಿದರೆ ನಾನು ಸತ್ತಿದ್ದೇನೆ ಎಂದು ಹೇಳಿ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಸುಶಾಂತ್ ಅವರ ತಂದೆ ತಾಯಿ 15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ಅಣ್ಣ ಅಶ್ವಿತ್ ಜೊತೆ ಪಕ್ಷಿಕೆರೆಯಲ್ಲಿ ವಾಸ್ತವ್ಯ ಇದ್ದರು ಎಂದು ಪೋಲಿಸರು ತಿಳಿಸಿದ್ದಾರೆ.