ಹೈದರಾಬಾದ್ : ಶಾಲೆಯಲ್ಲಿಯೇ ಕುಡಿದು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದ ಶಿಕ್ಷಕನನ್ನು ಆಂಧ್ರ ಪ್ರದೇಶ ಸರ್ಕಾರ ಅಮಾನತು ಮಾಡಿರುವ ಘಟನೆ ನಡೆದಿದೆ.
ಕೃಷ್ಣ ಜಿಲ್ಲೆಯ ಪಲಕ ಮಂಡಲ್ ಪ್ರದೇಶದ ಮಂಡಲ್ ಪರಿಷತ್ ಶಾಲೆಯ ಕೆ. ಕೋಟೇಶ್ವರ ರಾವ್ ಅಮಾನಾತು ಆಗಿರುವ ಶಿಕ್ಷಕ. ಈ ವ್ಯಕ್ತಿ ಮದ್ಯದ ಬಾಟಲಿಗಳನ್ನು ತರಗತಿಗಳಿಗೆ ಹಾಗೂ ಶಿಕ್ಷಕರ ಕೊಠಡಿಗಳಲ್ಲಿಯೇ ಇಟ್ಟುಕೊಂಡು ಕುಡಿಯುತ್ತಿದ್ದನಂತೆ. ಈ ಬಗ್ಗೆ ಕೇಳಿದರೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಶಿಕ್ಷಕ ಕೋಟೇಶ್ವರ ರಾವ್ ಕುಡಿಯುವ ವಿಡಿಯೋವನ್ನು ಪೋಷಕರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹಾಗೂ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಕುಡಿಯುವದರ ಬಗ್ಗೆ ಪ್ರಶ್ನೆ ಮಾಡಿದ್ದ ಮಹಿಳೆಯ ಬಟ್ಟೆ ಬಿಚ್ಚುವಂತೆ ಆರೋಪಿಯು ಕೇಳಿದ್ದನಂತೆ. ಇಂತಹ ಶಿಕ್ಷಕರು ಶಾಲೆಯಲ್ಲಿ ಇದ್ದರೆ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪೋಷಕರು ಆರೋಪಿಸಿದ್ದಾರೆ. ಆದ್ರಿಂದಾಗಿ ಪೋಷಕರೆಲ್ಲರು ಸೇರಿಕೊಂಡು ಕೋಟೇಶ್ವರ ರಾವ್ ಅವರ ನಡವಳಿಕೆಯನ್ನು ಸೆರೆ ಹಿಡಿದಿದ್ದೇವೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.