ಮೈಸೂರು ನಾವೆಲ್ಲ ಪ್ರೇಮ ವೈಫಲ್ಯಕ್ಕೆ ಒಳಗಾದ ಕೆಲವು ಯುವಕರು ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ಆಕೆಯ ಮೇಲೆ ಆ್ಯಸಿಡ್ ಎರಚೋದು, ಕೊಲೆ ಮಾಡೋದು ಇಂತಹ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಪ್ರೀತಿಸಿದಾತ ಸಿಗಲಿಲ್ಲ ಎಂದು ಮಾಜಿ ಪ್ರಿಯಕರನ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಮೈಸೂರು ಮೂಲದ ಉಮೇಶ್ ನಾಲ್ಕೈದು ವರ್ಷಗಳಿಂದ ಬೆಂಗಳೂರು ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಇತ್ತೀಚೆಗೆ ಇವರ ಸಂಬಂಧ ಮುರಿದು ಹೋಗಿ ಇಬ್ಬರು ಪ್ರತ್ಯೇಕವಾಗಿದ್ದರು. ಆಗಸ್ಟ್ 31ರಂದು ಉಮೇಶ್ ಬೆಂಗಳೂರು ಮೂಲದ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದನು. ಇದರಿಂದ ರೊಚ್ಚಿಗೆದ್ದ ಪ್ರಿಯತಮೆ ಬೆಂಗಳೂರಿನಲ್ಲಿ ತನ್ನ ಮನೆಗೆ ಮಾಜಿ ಪ್ರೇಮಿ ಉಮೇಶ್ ಮತ್ತು ಆತನ ಪತ್ನಿಯನ್ನು ಕರೆದಿದ್ದಳು.
ಇತ್ತ ಉಮೇಶ್ ಮಾಜಿ ಪ್ರಿಯತಮೆ ಮನೆಗೆ ಕರೆದಳು ಅಂತ ಪತ್ನಿಯನ್ನು ಕರೆದುಕೊಂಡು ಆಕೆಯ ಮನೆಗೆ ಹೋಗಿದ್ದಾನೆ. ಅಲ್ಲಿ ಪ್ರಿಯತಮೆ ತನ್ನ ಮಾಜಿ ಪ್ರಿಯಕರ ಉಮೇಶ್ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ದೊಡ್ಡ ಜಗಳವೇ ನಡೆದಿತ್ತು. ಈಕೆ ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದೇ ವಿಚಾರದಲ್ಲಿ ಉಮೇಶ್ ಮತ್ತು ಯುವತಿಯ ನಡುವೆ ಹಲವು ಬಾರಿ ಜಗಳವಾಗಿದೆ.
ಇತ್ತೀಚೆಗೆ ಇದೇ ವಿಚಾರ ಮಾತಾಡಲು ಮೈಸೂರಿನ ರಾಮಸ್ವಾಮಿ ಸರ್ಕಲ್ ಬಳಿಗೆ ಉಮೇಶ್ನನ್ನು ಕರೆಸಿದ ಯುವತಿ ತನ್ನ ಸ್ನೇಹಿತರ ಜೊತೆಗೂಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನೆ ಸಂಬಂಧ ಯುವತಿ ಹಾಗೂ ಆಕೆಯ ಜೊತೆಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿರುವ ಉಮೇಶ್ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ.