ಮಂಗಳೂರು: ಕರಾವಳಿಯ ಮಂದಿ ಬಹು ದಿನಗಳಿಂದ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. ಮಂಗಳೂರು ಬೆಂಗಳೂರು ನಡುವಿನ ಅತ್ಯದ್ಭುತ ಪ್ರಕೃತಿ ಸೌಂದರ್ಯವನ್ನು ಅನುಭವಿಸಲು ಅವಕಾಶವಿರುವ ವಿಸ್ಟಾಡೋಮ್ ರೈಲು ಸಂಚಾರಕ್ಕೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಇಂದು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತಾನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಈ ಯೋಜನೆಗೆ ಅನುವು ಮಾಡಿಕೊಟ್ಟ ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮಾರ್ಗದಲ್ಲಿ ಸುಬ್ರಮಣ್ಯ ದೇವಸ್ಥಾನವಿದೆ. ಧಾರ್ಮಿಕ ಹಾಗೂ ಪ್ರಾಕೃತಿಕ ಅನುಭವಗಳು ಪ್ರವಾಸಿಗರಿಗೆ ಖುಷಿ ಕೊಡುತ್ತದೆ. ಮಂಗಳೂರಿಗೆ 2 ಕೋಚ್ ಗಳನ್ನು ಕೊಟ್ಟಿದ್ದಾರೆ. ಇದರಲ್ಲಿ 40 ಆಸನಗಳಿವೆ. ದಿವ್ಯಾಂಗರಿಗೆ ಪ್ರತ್ಯೇಕವಾಗಿರುವ ವ್ಯವಸ್ಥೆ ಇದರಲ್ಲಿದೆ. ಮೆಟ್ರೋ ರೈಲಿನ ಹಾಗೆ ಇಲ್ಲಿ ಮಾಹಿತಿಯನ್ನು ನೀಡುವ ವ್ಯವಸ್ಥೆಯಿದೆ. ಪಯಣದಲ್ಲಿ ಪ್ರಕೃತಿಯ ದೃಶ್ಯವನ್ನು ನೋಡುತ್ತಾ ಫೋಟೋಗಳನ್ನು ತೆಗೆದುಕೊಂಡು ಆನಂದಿಸಬಹುದು. ಇಂಥ ಯೋಜನೆಯನ್ನು ಸಾಕಾರಗೊಳಿಸಿದ ರೈಲ್ವೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವಾರಕ್ಕೆ ಮೂರು ಬಾರಿ ಸಂಚಾರ ನಡೆಸುವ ಯಶವಂತಪುರ-ಕಾರವಾರ (06211/ 06212) ರೈಲು, ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು (06575/06576) ರೈಲು, ಯಶವಂತಪುರ-ಮಂಗಳೂರು (06539) ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ (06540) ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗುತ್ತದೆ.
ವಿಸ್ಟಾಡಾಮ್ ಕೋಚ್ ದರ ಪಟ್ಟಿ ಈ ಕೆಳಗಿನಂತಿದೆ…
* ಯಶವಂತಪುರ-ಮಂಗಳೂರು ಜಂಕ್ಷನ್ – 1395 ರೂ.
* ಹಾಸನ-ಮಂಗಳೂರು ಜಂಕ್ಷನ್ – 960 ರೂ.
* ಹಾಸನ-ಸುಬ್ರಮಣ್ಯ ರಸ್ತೆ – 725 ರೂ.
* ಸಕಲೇಶಪುರ – ಸುಬ್ರಮಣ್ಯ ರಸ್ತೆ – 625 ರೂ.
* ಯಶವಂತಪುರ – ಸುಬ್ರಮಣ್ಯ ರಸ್ತೆ – 1175 ರೂ.