ಮಂಗಳೂರು: ಅಕ್ಕಿ ಎಲ್ಲಿಂದ ಬರುತ್ತೆ ಅಂತಾ ಪ್ರಶ್ನೆ ಕೇಳಿದ್ರೆ ಇವತ್ತು ಅದೆಷ್ಟೋ ಮಕ್ಕಳು ಅದು ಕಾರ್ಖಾನೆಯಲ್ಲಿ ತಯಾರುತ್ತದೆ ಎಂದು ಉತ್ತರ ಕೊಡಬಹುದು. ಅದಕ್ಕೆ ಕಾರಣ ಇವತ್ತು ಮರೆಯಾಗುತ್ತಿರುವ ಭತ್ತದ ಗದ್ದೆಗಳು. ಅದೆಷ್ಟೋ ಮಕ್ಕಳಿಗೆ ಗದ್ದೆ ಅಂದ್ರೇನು ಅನ್ನೋ ಕಲ್ಪನೆಯೇ ಇರಲಿಕ್ಕಿಲ್ಲ. ಇದ್ದಂತಹ ಅದೆಷ್ಟೋ ಗದ್ದೆಗಳು ಅಡಿಕೆ ತೋಟಗಳಾಗಿವೆ. ಸೈಟು ಗಳಾಗಿವೆ. ಇಲ್ಲಾ ಇನ್ಯಾವುದೋ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಹಾಗಾಗಿ ಗದ್ದೆಗಳು ಕಾಣ ಸಿಗೋದು ಅಪರೂಪ ಅನ್ನುವಂತಾಗಿದೆ.
ಇನ್ನು ಗದ್ದೆ ಇದ್ದರೂ ಅದರಲ್ಲಿ ಸಾಂಪ್ರದಾಯಿಕ ವಿಧಾನದ ಮೂಲಕ ನಾಟಿ ಮಾಡುವವರು ತುಂಬಾನೇ ಕಮ್ಮಿ. ಗದ್ದೆಯಲ್ಲಿ ಟ್ರ್ಯಾಕ್ಟರ್ ಟಿಲ್ಲರ್ ಗಳ ಸದ್ದಿನ ಮಧ್ಯೆ ಸಾಂಪ್ರದಾಯಿಕ ನಾಟಿ ಪದ್ಧತಿ ಸದ್ದಿಲ್ಲದೇ ಮರೆಯಾಗಿದೆ. ಹಿಂದೆಲ್ಲಾ ನೇಜಿ ನೆಡುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಕೇಳುತ್ತಿದ್ದ ಪಾಡ್ದನಗಳ ಜಾಗವನ್ನು ಇಂದು ಮೊಬೈಲ್ ಗಳಲ್ಲಿ ಪ್ಲೇ ಆಗುವ ಹಾಡುಗಳು ನುಂಗಿ ಹಾಕಿವೆ. ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳ ಸಿಗುವ ಪಾಡ್ದನಗಳು ಅಯ್ಯೋ ಇನ್ನೂ ಇದು ಜೀವಂತವಾಗಿದೆ ಅಲ್ವಾ ಅಂತಾ ಅನೇಕರು ನಿಟ್ಟುಸಿರು ಬಿಡುವಂತೆ ಮಾಡುವುದು ಸುಳ್ಳಲ್ಲ.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕುಯಿಂತೋಡು ಎಂಬಲ್ಲಿ ಇಂದಿಗೂ ಸಾಂಪ್ರದಾಯಿಕ ವಿಧಾನದ ಮೂಲಕವೇ ಭತ್ತದ ಕೃಷಿ ಮಾಡಲಾಗುತ್ತಿದ್ದು ಅಲ್ಲಿ ನೇಜಿ ನೆಡುವ ವೇಳೆ ಮಹಿಳೆಯರು ಪಾಡ್ದನ ಹೇಳುತ್ತಿರುವ ಅಪರೂಪದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ಈ ದೃಶ್ಯ ಖಂಡಿತಾ ನಿಮ್ಮ ಮನಸ್ಸಿಗೆ ಮುದ ನೀಡುವುದರಲ್ಲಿ ಸಂದೇಹವಿಲ್ಲ. ಆಧುನಿಕತೆ ಭರಾಟೆಯಲ್ಲಿ ಹಳೆಯ ಸಂಪ್ರದಾಯಗಳು ಆಚಾರ ವಿಚಾರಗಳು ಮರೆಯಾಗುತ್ತಿರುವ ಈ ಕಾಲದಲ್ಲಿ ಇನ್ನೂ ಕೂಡ ಹಳೆಯ ಪದ್ಧತಿಗಳು ಉಳಿಯಬೇಕು ಅನ್ನೋ ನಿಟ್ಟಿನಲ್ಲಿ ಇವರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ.