ಬೆಂಗಳೂರು : ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ನಿನ್ನೆ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಕತ್ತಿ ಅವರು ತಮ್ಮ ಆರೋಗ್ಯದ ಬಗ್ಗೆ ಕೊಂಚ ನಿರ್ಲಕ್ಷ್ಯ ವಹಿಸಿದ್ದೇ ಸಾವಿಗೆ ಕಾರಣವಾಯಿತಾ ಎಂಬ ಮಾತು ಕೇಳಿ ಬರುತ್ತಿದೆ.
ಇನ್ನು ಸಚಿವ ಉಮೇಶ್ ಕತ್ತಿಯವರ ತಂದೆ ವಿಶ್ವನಾಥ್ ಕತ್ತಿ ಅವರು ಕೂಡ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದರು. ವಿಶ್ವನಾಥ್ ಕತ್ತಿಯವರು ವಿಧಾನಸಭೆ ಅಧಿವೇಶನ ನಡೆಯುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು. ತಂದೆಯ ಮರಣದ ಬಳಿಕ ರಾಜಕೀಯ ಪ್ರವೇಶಿಸಿದ್ದ ಉಮೇಶ್ ಕತ್ತಿ, ತಂದೆಯಂತೆಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ರಾತ್ರಿ ಭೋಜನ ಸ್ವೀಕರಿಸಿದ ಬಳಿಕ ಶೌಚಾಲಯಕ್ಕೆ ತೆರಳಿದ ವೇಳೆ ಹೃದಯಾಘಾತ ಸಂಭವಿಸಿದೆ. ಅಲ್ಲೇ ಕುಸಿದು ಬಿದ್ದಿದ್ದ ಅವರನ್ನು ಸಮೀಪದ ಎಸ್.ಎಂ. ರಾಮಯ್ಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇನ್ನು ಉಮೇಶ್ ಕತ್ತಿ ಅವರಿಗೆ ಈ ಹಿಂದೆ ಕೂಡ 2 ಬಾರಿ ಹೃದಯಾಘಾತವಾಗಿತ್ತು. ವೈದ್ಯರು ಚಿಕಿತ್ಸೆ ನೀಡಿ, ಸ್ಟಂಟ್ ಅಳವಡಿಸಿದ್ದರು. ಆದರೆ ಉಮೇಶ್ ಕತ್ತಿ ಅವರು ನಿರ್ಲಕ್ಷಿಸಿದರಾ ಎಂಬ ಪ್ರಶ್ನೆ ಮೂಡಿದೆ.