ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಈ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ರಾಜ್ಯ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ನೀಡಿದ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ನಂದಿಗ್ರಾಮದ ಚುನಾವಣಾ ಪ್ರಚಾರದಲ್ಲಿ ನಡೆದ ದಾಳಿಯಲ್ಲಿಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ವೀಲ್ ಚೇರ್ ನಲ್ಲಿ ಕುಳಿತುಕೊಂಡು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ವೈದ್ಯರು ಅವರ ಎಡಗಾಲಿಗೆ ಬ್ಯಾಂಡೇಜ್ ಹಾಕಿದ್ದರು. ಹೀಗಾಗಿ ಮಮತಾ, ವೀಲ್ ಚೇರ್ ಮೇಲೆಯೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನು ಟೀಕಿಸುವ ಭರದಲ್ಲಿ ದಿಲೀಪ್ ಘೋಷ್ ವಿವಾದಿತ ಹೇಳಿಕೆ ನೀಡಿದ್ದಾರೆ. ಪುರುಲಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ದಿಲೀಪ್ ಘೋಷ್ ಅವರು, ಮಮತಾ ಬ್ಯಾನರ್ಜಿ ತಮ್ಮ ಕಾಲು ಪ್ರದರ್ಶಿಸುತ್ತಿದ್ದಾರೆ. ಅವರು ಸೀರೆ ಧರಿಸಿದ್ದು ಮತ್ತೊಂದು ಕಾಲು ಕೂಡ ಕಾಣಿಸುತ್ತದೆ. ಆ ರೀತಿ ಯಾರೂ ಸೀರೆ ಧರಿಸುವುದನ್ನು ನಾನು ನೋಡಿಲ್ಲ. ಕಾಲುಗಳನ್ನು ಪ್ರದರ್ಶಿಸುವುದಾದರೆ ಸೀರೆ ಬೇಡ, ಬರ್ಮುಡಾ ಚಡ್ಡಿಯನ್ನು ಧರಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಈ ಬಗ್ಗೆ ತೀವ್ರ ಕಿಡಿ ಕಾರಿರುವ ಟಿಎಂಸಿ ಮಹಿಳಾ ನಾಯಕಿಯರು, ‘ಒಬ್ಬ ಮಹಿಳೆ ಬಗ್ಗೆ ಅಪಮಾನಕಾರವಾಗಿ ಮಾತನಾಡಿರುವ ಈ ವಿಕೃತ ಕೋತಿಗಳು ಬಂಗಾಳವನ್ನು ಗೆಲ್ಲುವ ಕನಸು ಕಾಣುತ್ತಿವೆ’ ಎಂದು ವಕ್ತಾರೆ ಮಹುವಾ ಮೋಯಿತ್ರಾ ಹೇಳಿದ್ದಾರೆ.