ಮಂಗಳೂರು : ಸುಳ್ಯ ತಾಲೂಕಿನ ಮಂಡಕೋಲು ಗ್ರಾಮದ ಗ್ರಾಮಕರಣೀಕನಾಗಿದ್ದ ಆರೋಪಿ ಎಸ್.ಮಹೇಶ್ ಎಂಬಾತ ದೂರುದಾರರಾದ ಸುಳ್ಯ ಮಂಡಕೋಲು ನಿವಾಸಿ ಗೋಪಾಲಕೃಷ್ಣರವರ ಅಕ್ರಮ ಸಕ್ರಮದ ಅರ್ಜಿಯ ವಿಲೇವಾರಿಗೆ 60 ಸಾವಿರ ರೂಪಾಯಿ ಲಂಚದ ಹಣದ ಬೇಡಿಕೆಯೊಡ್ಡಿದ್ದರು. ದಿನಾಂಕ 07-06-2016 ರಂದು 45 ಸಾವಿರ ರೂಪಾಯಿಯನ್ನು ಲಂಚದ ಹಣವಾಗಿ ಗ್ರಾಮಕರಣೀಕ ಮಹೇಶ್ ಸ್ವೀಕರಿಸುವಾಗ ಎಸಿಬಿ ದಾಳಿ ಮಾಡಿ ಬಂಧಿಸಲಾಗಿತ್ತು. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಮಂಗಳೂರಲ್ಲಿ ಅ.ಕ್ರ 02/2016 ಕಲಂ 7, 13(1) (ಡಿ) ಜೊತೆಗೆ 13(2) ಭ್ರಷ್ಟಾಚಾರ ತಡೆ ಕಾಯ್ದೆ, 1988 ರೀತಿಯ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಇವರು ವಿಚಾರಣೆ ನಡೆಸಿ ಮಾರ್ಚ್ 2 ರಂದು ಅಂತಿಮ ತೀರ್ಪು ನೀಡಿದ್ದಾರೆ. ತೀರ್ಪಿನಲ್ಲಿ ಆರೋಪಿ ಎಸ್.ಮಹೇಶ್, ಗ್ರಾಮಕರಣೀಕನಿಗೆ 14 ವರ್ಷಗಳ ಸಾದಾ ಸಜೆ ಹಾಗೂ ರೂ 70,000/- ದಂಡ ವಿಧಿಸಿದ್ದು, ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 08 ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಿ ಅಂತಿಮ ತೀರ್ಪು ಹೊರಡಿಸಲಾಗಿದೆ. ಆರೋಪಿ ಮಹೇಶ್ ಸುಳ್ಯದಲ್ಲಿ ಟ್ರ್ಯಾಪ್ ಬಳಿಕ ಅಮಾನತು ಆಗಿದ್ದ ಬಳಿಕ ರಿವೋಕ್ ಆಗಿ ಬೆಳ್ತಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಬಳಿಕ ಪ್ರಸ್ತುತ ಪುತ್ತೂರಿನಲ್ಲಿ ಕರ್ತವ್ಯದಲ್ಲಿದ್ದರು. ಆರೋಪಿಯನ್ನು ಮಂಗಳೂರು ಸಬ್ ಜೈಲಿಗೆ ಕಳುಹಿಸಲಾಗಿದೆ.
ಈ ಪ್ರಕರಣದಲ್ಲಿ ಪ್ರಕರಣದ ತನಿಖೆಯನ್ನು ಶ್ರೀ ದಿನಕರ ಶೆಟ್ಟಿ ಮಾಡಿದ್ದು ನಂತರ ಎಸಿಬಿ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ತನಿಖೆಯನ್ನು ಮುಂದುವರಿಸಿ ಆರೋಪಿಯ ವಿರುದ್ಧ ಘನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ, ಮಂಗಳೂರು ಇಲ್ಲಿಗೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದಿರುತ್ತದೆ. ಸದರಿ ಪ್ರಕರಣದಲ್ಲಿ ರವೀಂದ್ರ ಮುನ್ನಿಪಾಡಿ, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.