ಉಪ್ಪಿನಂಗಡಿ: ಜಗತ್ತಿನಲ್ಲಿ ನಡೆಯುವ ಕೆಲವೊಂದು ಘಟನೆಗಳು ನೋಡಿದ್ರೆ ನಿಜಕ್ಕೂ ಮಾನವೀಯತೆ ಅನ್ನೋದು ಇದ್ಯಾ ಅನ್ನೋ ಸಂದೇಹ ಮೂಡುತ್ತೆ. ಸಂಬಂಧಗಳಿಗೆ ಬೆಲೆನೇ ಇಲ್ವಾ ಅನ್ನೋ ಪ್ರಶ್ನೆ ಕಾಡುತ್ತೆ. ಹೆತ್ತ ಅಪ್ಪ ಅಮ್ಮನನ್ನೇ ಬೀದಿಗೆ ತಳ್ಳುವ ಮಕ್ಕಳನ್ನು ನೋಡಿದಾಗ ಇವರೆಲ್ಲಾ ಮನುಷ್ಯರಾ ಅನ್ನೋ ಪ್ರಶ್ನೆ ಸಹಜವಾಗೇ ಮೂಡುತ್ತೆ. ಇಂತಹ ಅಮಾನವೀಯ ಘಟನೆಯೊಂದು ಉಪ್ಪಿನಂಗಡಿಯಲ್ಲಿ ನಡೆದಿದೆ.
ಲಕ್ಷ್ಮೀ ಹೆಗ್ಡೆ (80) ಎಂಬ ವೃದ್ಧೆ ಅವರು ಉಪ್ಪಿನಂಗಡಿ ಸಮೀಪದಲ್ಲಿ ಸ್ವಂತ ಮನೆ ಹೊಂದಿದ್ದರು. ಆದರೆ ವೃದ್ಧಾಪ್ಯದಲ್ಲಿ ಮಕ್ಕಳಿಗೆ ಅಮ್ಮ ಭಾರವಾಗಿ ಯಾರೂ ನೋಡುವವರು ಇಲ್ಲದೇ ಅವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳನ್ನು ಕರೆದು ತಾಯಿಯನ್ನು ನೋಡಿಕೊಳ್ಳುವಂತೆ ಮಕ್ಕಳಿಗೆ ಬುದ್ಧಿ ಹೇಳಿದಾಗ ಮಕ್ಕಳು ಒಪ್ಪಲಿಲ್ಲ. ಹಾಗಾಗಿ ಲಕ್ಷ್ಮೀ ಹೆಗ್ಡೆ ಅವರನ್ನು ಮಗನ ಸ್ಥಾನದಲ್ಲಿ ನಿಂತು ಅಂದಿನ ಉಪ್ಪಿನಂಗಡಿ ಠಾಣಾಧಿಕಾರಿ ನಂದ ಕುಮಾರ್, ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರು. ಆಗಾಗ ಆಶ್ರಮಕ್ಕೆ ಭೇಟಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದರು.
ಕನ್ಯಾನದ ಆಶ್ರಮದಲ್ಲಿ ಚೆನ್ನಾಗಿಯೇ ಇದ್ದ ಲಕ್ಷ್ಮೀ ಹೆಗ್ಡೆ ಭಾನುವಾರ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ. ಆಶ್ರಮಕ್ಕೆ ಸೇರಿದಾಗ ನೀಡಲಾದ ಸಂಬಂಧಿಕರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದ ಆಶ್ರಮದವರು, ನಿಧನ ಸುದ್ದಿಯನ್ನು ತಿಳಿಸಿ, ಶವದ ಅಂತ್ಯವಿಧಿ ನೆರವೇರಿಸಲು ಬನ್ನಿ, ಶವವನ್ನು ತೆಗೆದುಕೊಂಡು ಹೋಗುವಂತೆ ಹೇಳಿರೆ. ಆದರೆ ಮನವಿಗೆ ಸ್ಪಂದನೆ ದೊರೆಯದೇ ಇದ್ದಾಗ ಅವರ ಬಗ್ಗೆ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿ ನಂದಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ.ಆದರೆ ಕರ್ತವ್ಯದ ಕಾರಣಕ್ಕೆ ದೂರದೂರಿನಲ್ಲಿದ್ದ ನಂದಕುಮಾರ್ ಅವರಿಗೆ ಸಕಾಲದಲ್ಲಿ ಆಗಮಿಸಲು ಅಸಾಧ್ಯವಾಗಿತ್ತು. ಹಾಗಾಗಿ ಮೃತರ ಅಂತ್ಯವಿಧಿಯನ್ನು ಅಲ್ಲಿಯೇ ಆಶಅರಮದವರು ನೆರವೇರಿಸಿದ್ದಾರೆ.