ಕೋಲಾರ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಮನೆಗೆ ನುಗ್ಗಿದ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಹೊಸಪಾಳ್ಯದಲ್ಲಿ ನಡೆದಿದೆ.
18 ವರ್ಷದ ಪ್ರಿಯಾಂಕ ಮೃತ ದುರ್ದೈವಿ. ಶ್ರೀನಿವಾಸಪುರ ಮೂಲದ ಯುವತಿ ಕುಟುಂಬ ಮುಳಬಾಗಿಲು ನಗರದಲ್ಲಿ ಬಾಡಿಗೆ ಮನೆಗೆ ವಾಸಕ್ಕೆಂದು ಇತ್ತೀಚಿಗೆ ಬಂದಿದ್ದರು. ಪ್ರಿಯಾಂಕ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದಳು.
ನಿನ್ನೆ ಯುವತಿ ಮನೆ ಬಳಿ ಓಡಾಡಿಕೊಂಡಿದ್ದಳು. ಬಳಿಕ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಜಾಹ್ನವಿ, ಡಿವೈಎಸ್ಪಿ ಕೆ.ಸಿ.ರವಿ ಸ್ಥಳ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಯಿತು. ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಬಳಿಕ ಯುವತಿಯ ಸಾವಿಗೆ ಕಾರಣ ಏನೆಂದು ಹೊರಬರಲಿದೆ.