ಉಡುಪಿ: ಮಧ್ಯರಾತ್ರಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಸ್ವತಃ ಆಟೋ ಚಲಾಯಿಸಿಕೊಂಡು 18 ಕಿ.ಮೀ ದೂರದ ಆಸ್ಪತ್ರೆ ಸೇರಿಸಿ ಗಟ್ಟಿತನ ಮೆರೆದಿರುವ ಆಶಾ ಕಾರ್ಯಕರ್ತೆಯ ಮಾನವೀಯತೆಯ ಕಾರ್ಯಕ್ಕೆ ಎಲ್ಲಡೆಯಿಂದ ಪ್ರಶಂಶೆ ಮಹಾಪೂರಗಳು ಹರಿದು ಬರುತ್ತಿದೆ.
ಉಡುಪಿ ನಗರದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಪೆರ್ಣಂಕಿಲದ ನಿವಾಸಿ ಶ್ರೀಲತಾ ಎಂಬವರಿಗೆ ಮಧ್ಯರಾತ್ರಿ 3.15ರ ಹೆರಿಗೆ ನೋವು ಹೆಚ್ಚಾಗಿದೆ. ಕೂಡಲೇ ಆಶಾ ಕಾರ್ಯಕರ್ತೆ ರಾಜೀವಿಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ ತಡರಾತ್ರಿ ಯಾವುದೇ ಸೂಕ್ತ ಸಾರಿಗೆ ಸೌಲಭ್ಯಗಳಿಲ್ಲದ ಕಾರಣ ಆಟೊ ಚಾಲನೆ ತಿಳಿದಿರುವ ರಾಜೀವಿಯವರೇ ಹಿಂದು-ಮುಂದು ಯೋಚಿಸದೆ ಕೂಡಲೇ ಗರ್ಭಿಣಿ ಶ್ರೀಲತಾರನ್ನು ಉಡುಪಿ ನಗರದಲ್ಲಿರುವ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತಂದಿದ್ದಾರೆ.
ಶ್ರೀಲತಾಗೆ ಹೆಣ್ಣುಮಗು ಜನಿಸಿದ್ದು, ಆಶಾ ಕಾರ್ಯಕರ್ತೆ ರಾಜೀವಿಯವರ ಸಮಯಪ್ರಜ್ಞೆ ಮತ್ತು ವೃತ್ತಿಯಲ್ಲಿರುವ ಶ್ರದ್ಧೆಯಿಂದಾಗಿ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಶ್ರೀಲತಾರ ಆಪ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಆಟೋ ಚಾಲನೆ ಕಲಿತದ್ದು ಹೇಗೆ?
ರಾಜೀವಿಯವರು ವಾಸವಿರುವ ಪೆರ್ಣಂಕಿಲ ಗ್ರಾಮದಲ್ಲಿ ಹಿಂದೆ ಬಸ್ ಸೌಲಭ್ಯಗಳು ಇರಲಿಲ್ಲ. ರಸ್ತೆಗಳು ಹದಗೆಟ್ಟು ಆಟೊ ಸಂಚರಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಆಗ, ಹವ್ಯಾಸಕ್ಕಾಗಿ ಪತಿಯ ಸಹಕಾರದಿಂದ ಆಟೊ ಚಾಲನೆ ಮಾಡುವುದನ್ನು ಕಲಿತ್ದಿದ್ದು. ಮುಂದೆ ಇದೇ ಅವರ ವೃತ್ತಿ ಕುಟುಂಬಕ್ಕೆ ಆಧಾರವಾಯಿತು. 20 ವರ್ಷದಿಂದ ಆಟೊ ಓಡಿಸುತ್ತಿರವ ರಾಜೀವಿ ಅವರ ಪತಿ 5 ವರ್ಷಗಳ ಹಿಂದೆ ಪತಿ ಅನಾರೋಗ್ಯದಿಂದ ಮೃತರಾಗಿದ್ದು. ಮಗಳ ಮದುವೆಯಾಗಿದ್ದು, ಮಗ ಕೆಲಸದಲ್ಲಿದ್ದಾನೆ. ಜೀವನ ನಿರ್ವಹಣೆಗೆ ಬೆಳಿಗ್ಗಿನಿಂದ ಮಧ್ಯಾಹ್ನದವರೆಗೂ ಆಶಾ ಕಾರ್ಯಕರ್ತೆಯಾಗಿ, ನಂತರ ರಾತ್ರಿವರೆಗೂ ಆಟೊ ಚಾಲಕಿಯಾಗಿ ದುಡಿಯುತ್ತಿದ್ದಾರೆ.