ಇಂದೋರ್: 100 ರೂ. ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ತರಕಾರಿ, ಮೊಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ತಳ್ಳುಗಾಡಿಯಲ್ಲಿ ಮಧ್ಯಪ್ರದೇಶದ ಇಂದೋರ್ನ ಮಹಾನಗರ ಪಾಲಿಕೆಯ ಸಿಬ್ಬಂದಿ ಪಲ್ಟಿ ಮಾಡಿ ಸಾವಿರಾರು ರೂ. ಮೌಲ್ಯದ ಮೊಟ್ಟೆಗಳನ್ನು ರಸ್ತೆ ಪಾಲು ಮಾಡಿದ ಘಟನೆ ನಡೆದಿದೆ.
ಘಟನೆ ಸೆರೆಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೋವಿಡ್ 19 ವೈರಸ್ ನಿಂದಾಗಿ ದಿನಂಪ್ರತಿ ಮೊಟ್ಟೆ ವ್ಯಾಪಾರವೂ ಕಡಿಮೆಯಾಗಿರುವ ಸಂಕಷ್ಟದ ಸಮಯದಲ್ಲೂ, ಅಧಿಕಾರಿಯ ದರ್ಪದಿಂದಾಗಿ ಮೊಟ್ಟೆ ಒಡೆದು ಹಾಕಿದ್ದರಿಂದ ಮತ್ತಷ್ಟು ಆರ್ಥಿಕ ಹೊರೆ ಬಿದ್ದಂತಾಗಿದೆ.
ಘಟನೆಯ ವಿವರ
ಕೋವಿಡ್ ಹಿನ್ನೆಲೆಯಲ್ಲಿ ಇಂದೋರ್ ಮಹಾನಗರಪಾಲಿಕೆ ಎಡ-ಬಲ ಪದ್ಧತಿ, ಅಂದರೆ ಒಂದು ದಿನ ರಸ್ತೆಯ ಎಡಗಡೆ ಇರುವ ಅಂಗಡಿಗಳು ತೆರೆದಿದ್ದರೆ, ಇನ್ನೊಂದು ದಿನ ಬಲಗಡೆ ಇರುವ ಅಂಗಡಿಗಳನ್ನು ತೆರೆದು ವ್ಯಾಪಾರ-ವಹಿವಾಟು ನಡೆಸುವ ಪದ್ಧತಿಯನ್ನು ಜಾರಿಗೊಳಿಸಿದೆ.
ಇದರಂತೆ ಶುಕ್ರವಾರ ಬಲ ಬದಿಯ ಅಂಗಡಿಗಳು ತೆರೆದು ವಹಿವಾಟು ಮಾಡಬಹುದಿತ್ತು. ಆದರೆ, ಬಾಲಕ ತನ್ನ ಗಾಡಿಯನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡಿದ್ದು ಪಾಲಿಕೆ ಸಿಬ್ಬಂದಿಯ ಕೆಂಗಣ್ಣಿಗೆ ಗುರಿಯಾಯಿತು.
ತಕ್ಷಣವೇ ಬಾಲಕನ ಬಳಿ ಹೋದ ಅವರು 100 ರೂ. ಲಂಚ ಕೊಡು ಇಲ್ಲವೇ ಗಾಡಿ ತೆಗಿ ಎಂದು ಹೇಳಿದ್ದಾರೆ. ಇಲ್ಲದಿದ್ದರೆ ನೂರು ರೂಪಾಯಿ ಲಂಚ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಹುಡುಗ ಅದಕ್ಕೆ ಒಪ್ಪದಿದ್ದಾಗ ಅಧಿಕಾರಿಗಳು ಗಾಡಿಯನ್ನು ಬುಡಮೇಲು ಮಾಡಿದ್ದರು. ಇದರಿಂದಾಗಿ ಎಲ್ಲಾ ಮೊಟ್ಟೆಗಳು ಒಡೆದು ಹೋದವು ಎಂದು ಹುಡುಗ ಆರೋಪಿಸಿದ್ದಾನೆ.