ಮಂಗಳೂರು: ವಿದ್ಯಾರ್ಥಿನಿಯರು ಹಿಜಾಬ್ ಬಗ್ಗೆ ಯೋಚಿಸದೇ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಲಿ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ಯಾವ ಆದೇಶ ಮಾಡಲಾಗಿದೆಯೋ ಅದನ್ನು ಗೌರವಿಸಿ ವಿದ್ಯಾರ್ಥಿನಿಯರು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲಿ. ಖಾಸಗಿ ಶಾಲೆಗಳಲ್ಲಿ ಅಲ್ಲಿನ ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟದ್ದು. ವಿದ್ಯಾರ್ಥಿ – ವಿದ್ಯಾರ್ಥಿನಿಯರು ಯಾವುದೇ ಮಾನಸಿಕ ಒತ್ತಡಕ್ಕೆ ಸಿಲುಕದೆ ನೆಮ್ಮದಿಯಿಂದ ಪರೀಕ್ಷೆ ಬರೆಯಬೇಕು. ಇಂತಹ ವಾತಾವರಣ ನಿರ್ಮಾಣ ಮಾಡಬೇಕೆಂದು ಖಾಸಗಿ ಶಾಲೆಗಳಲ್ಲಿ ಮನವಿ ಮಾಡುತ್ತೇನೆ. ಹೆತ್ತವರೂ ವಿದ್ಯಾರ್ಥಿಗಳ ಭವಿಷ್ಯವನ್ನು ಆಲೋಚನೆ ಮಾಡಿ ಪರೀಕ್ಷೆ ಬರೆಯಲು ಪ್ರೋತ್ಸಾಹ ಕೊಡಬೇಕು ಎಂದು ಖಾದರ್ ಎಂದಿದ್ದಾರೆ.
ಹಿಜಾಬ್ ಕುರಿತು ಹೈಕೋರ್ಟ್ ನಿರ್ದೇಶನದನ್ವಯ ಸರಕಾರ ಆದೇಶ ಮಾಡಿದೆ. ಆದ್ದರಿಂದ ಯಾವುದೇ ವಿದ್ಯಾರ್ಥಿಗಳು ಕಾನೂನು ಹಾಗೂ ಸರಕಾರದ ಜೊತೆಯಲ್ಲಿ ಸಂಘರ್ಷಕ್ಕೆ ಇಳಿಯಬಾರದು. ಹಿಜಾಬ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.ಅಲ್ಲಿ ನ್ಯಾಯ ದೊರೆಯಬಹುದೆಂಬ ನಂಬಿಕೆಯಿದೆ ಎಂದು ಯು.ಟಿ.ಖಾದರ್ ಹೇಳಿದ್ದಾರೆ.