ಜೀವಂತ ಮೀನನ್ನು ನುಂಗಲು ಯತ್ನಿಸಿ ಗಂಟಲಲ್ಲಿ ಸಿಲುಕಿ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ಮಹೆಬೂಬ್ನಗರ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ನೀಲ್ಯಾ ನಾಯ್ಕ್. ಮೆಹಬೂಬನಗರ ಜಿಲ್ಲೆಯ ಬಾಳನಗರ ಮಂಡಲದ ಮೇಡಿಗಡ್ಡ ತಾಂಡಾದಿಂದ ಕೆಲವು ಸ್ನೇಹಿತರು ಶನಿವಾರ ಮೀನುಗಾರಿಕೆಗೆ ತೆರಳಿದ್ದರು. ಮೋತಿಘಾನಪುರ ಗ್ರಾಮದ ಬಳಿಯ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಿದ್ದರು. ಅದರಲ್ಲಿ ಒಬ್ಬಾತನಾದ ನೀಲ್ಯಾ ನಾಯ್ಕ್ ಮೀನನ್ನು ತೆಗೆದುಕೊಂಡು ಬಾಯಿಗೆ ಹಾಕಿದನು. ಆದರೆ, ಮೀನು ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಆತನಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಸ್ನೇಹಿತರು ಎಷ್ಟೇ ಪ್ರಯತ್ನಿಸಿದರೂ ಮೀನು ಮಾತ್ರ ಹೊರಬರಲಿಲ್ಲ. ಈ ವೇಳೆ ಉಸಿರಾಡಲಾಗದೇ ನೀಲ್ಯಾ ನಾಯ್ಕ ಸ್ಥಳದಲ್ಲೇ ಮೃತಪಟ್ಟರು.
ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕ್ಷುಲ್ಲಕ ಚೇಷ್ಟೆಗಳಿಂದ ನೀಲ್ಯಾ ನಾಯ್ಕ್ ಅಕಾಲಿಕ ಮರಣ ಹೊಂದಿದ್ದು, ತನ್ನನ್ನೇ ನಂಬಿದ್ದ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಈ ರೀತಿಯ ಪ್ರಯತ್ನಗಳನ್ನು ಮಾಡದಂತೆ ಸ್ಥಳೀಯರು ಮೀನುಗಾರರಲ್ಲಿ ಆಗ್ರಹಿಸಿದ್ದಾರೆ.