ಪಂಜಾಬ್ : ಜಾತಕದಲ್ಲಿನ ದೋಷ ನಿವಾರಣೆಗಾಗಿ ಟ್ಯೂಷನ್ ಟೀಚರ್ 13 ವರ್ಷದ ಬಾಲಕನನ್ನು ವಿವಾಹವಾದ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.
ಜಲಂಧರ್ ನ ಬಸ್ತಿ ಭಾವ ಕೇಲ್ ಪ್ರದೇಶದ ಯುವತಿ ಮೂಲ ನಕ್ಷತ್ರದಲ್ಲಿ ಜನಿಸಿದ್ದಳು. ಹಾಗಾಗಿ ಜ್ಯೋತಿಷಿ ದೋಷ ನಿವಾರಣೆಗಾಗಿ ಬಾಲಕನನ್ನು ವಿವಾಹವಾಗುವಂತೆ ಹೇಳಿದ್ದನಂತೆ. ಅದರಂತೆ ಟ್ಯೂಷನ್ ಗಾಗಿ ಬಂದ ಬಾಲಕನನ್ನೇ ಮದುವೆಯಾಗಿದ್ದಾಳೆ. ಯುವತಿ ಒಂದು ವಾರ ಬಾಲಕ ನಮ್ಮ ಮನೆಯಲ್ಲಿ ಇರಲಿ ಎಂದು ಬಾಲಕನ ಪೋಷಕರನ್ನು ಒಪ್ಪಿಸಿದ್ದಳು ಎನ್ನಲಾಗಿದೆ.
ಇನ್ನು ಬಾಲಕ ಮನೆಗೆ ಹಿಂತಿರುಗಿದ ನಂತರ ಘಟನೆಯನ್ನು ಹೆತ್ತವರ ಬಳಿ ಹೇಳಿಕೊಂಡಿದ್ದು, ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯ ಕುಟುಂಬಸ್ಥರು ಒತ್ತಾಯಪೂರ್ವಕವಾಗಿ ಮದುವೆ ಮಾಡಿದ್ದು, ಹಳದಿ ಕಾರ್ಯಕ್ರಮದಿಂದ ಹಿಡಿದು ಪ್ರಸ್ಥ ಕೂಡ ಮಾಡಿಸಿದ್ದಾರೆ. ಎಲ್ಲಾ ಮುಗಿದ ನಂತರ ಯುವತಿ ಬಳೆಗಳನ್ನು ಒಡೆದು ವಿಧವೆ ಆಗಿದ್ದೇನೆಂದು ಘೋಷಿಸಿಕೊಂಡಿದ್ದಾಳೆ. ನಂತರ ಕುಟುಂಬಸ್ಥರು ಶ್ರದ್ಧಾಂಜಲಿ ಸಭೆ ಮಾಡಿದ್ದಾರೆ ಎಂದು ದೂರಿನಲ್ಲಿ ಬಾಲಕನ ಪೋಷಕರು ವಿವರಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ ವಿಷಯ ತಿಳಿಯುತ್ತಿದ್ದಂತೆ ಠಾಣೆಗೆ ಆಗಮಿಸಿದ ಮಹಿಳೆ, ಬಾಲಕನ ಪೋಷಕರ ಜೊತೆ ಮಾತುಕತೆ ನಡೆಸಿ ದೂರು ವಾಪಸ್ ಪಡೆಯಲು ಮನವೊಲಿಸಿದ್ದಾಳೆ. ಇಬ್ಬರು ರಾಜಿ ಆಗಿ ಬಾಲಕನ ಮನೆಯವರು ದೂರು ವಾಪಸ್ ಪಡೆದಿದ್ದಾರೆ.