ಕಾಸರಗೋಡು : ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ವೆಸ್ಟ್ ಎಳೇರಿ ಸಮೀಪದ ಪರಪ್ಪಚ್ಚಾಲ್ ಎಂಬಲ್ಲಿ ನಡೆದಿದೆ.
ಕಾವುಂದಳ ದ ರೆಜಿ ಅವರ ಪುತ್ರ ಆಲ್ಬಿನ್ (15) ಹಾಗೂ ಸಹೋದರ ಥಾಮಸ್ ಅವರ ಪುತ್ರ ಬ್ಲಾಸನ್ ಥಾಮಸ್ (20) ಮೃತ ದುರ್ದೈವಿಗಳು.
ಮೃತಪಟ್ಟವರು ಒಂದೇ ಕುಟುಂಬದವರಾಗಿದ್ದು ಆಲ್ಬಿನ್ ವಾರಕ್ಕೋಡ್ ಶಾಲೆಯ 10ನೇ ತರಗತಿ ಹಾಗೂ ಥಾಮಸ್ ಮಂಗಳೂರಿನ ಡಾ.ಎಂ.ವಿ.ಶೆಟ್ಟಿ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾರೆ.
ಇಬ್ಬರು ಸಮೀಪದ ಚೈತ್ರ ವಾಹಿನಿ ಹೊಳೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. ನೀರಿನ ಉಬ್ಬರ ಹೆಚ್ಚಾದ ಕಾರಣ ಇಬ್ಬರು ಮೇಲೆ ಬರಲಾಗದೆ ನೀರುಪಾಲಾಗಿದ್ದು, ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಇಬ್ಬರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.