ಬೆಳ್ತಂಗಡಿ : ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ರಕ್ಷಿತ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ರಕ್ಷಿತ್ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಜಂತುಗೋಳಿ ಬಳಿಯ ರತ್ನಾಕರ ಮತ್ತು ರತ್ನಾ ದಂಪತಿ ಪುತ್ರ. ಈತ ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ. ಇಂದು ಬೆಳಿಗ್ಗೆ ಆನ್ ಲೈನ್ ಕ್ಲಾಸ್ ಎಂದು ಮನೆಯ ಕೊಠಡಿಯೊಳಗೆ ಬಾಗಿಲು ಹಾಕಿ ಕುಳಿತುಕೊಂಡಿದ್ದ. ಮಧ್ಯಾಹ್ನ ಊಟಕ್ಕೆಂದು ತಾಯಿ ರಕ್ಷಿತ್ ಇದ್ದ ಮನೆಯ ಕೋಣೆ ಬಾಗಿಲನ್ನು ಬಡಿದಿದ್ದು, ಬಾಗಿಲು ತೆರೆದಿರಲಿಲ್ಲ. ಬಳಿಕ ಫೋನ್ ಮಾಡಿದ್ರೂ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದರಿಂದ ಕಿಟಕಿ ತೆಗೆದು ನೋಡಿದ ಪೋಷಕರಿಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ತಕ್ಷಣ ಆತನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಅಷ್ಟರಲ್ಲಿ ರಕ್ಷಿತ್ ಮೃತಪಟ್ಟಿದ್ದಾನೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆತ್ಮಹತ್ಯೆ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ.