ಬೆಂಗಳೂರು : ಹೃದಯಾಘಾತದಿಂದ ನಿಧನರಾದ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಹರೀಶ್ಚಂದ್ರ ಘಾಟ್ ನಲ್ಲಿ ನಡೆಯಿತು.
ಮಲ್ಲೇಶ್ವರಂನ ಸ್ಪಂದನಾ ನಿವಾಸದಿಂದ ಹರೀಶ್ಚಂದ್ರ ಘಾಟ್ ವರೆಗೆ ಸ್ಪಂದನ ಅವರ ಅಂತಿಮ ಯಾತ್ರೆ ನಡೆಯಿತು. ಬಳಿಕ ಪುತ್ರ ಶೌರ್ಯ ವಿಧಿ ವಿಧಾನಗಳನ್ನು ನೆರವೇರಿಸಿದರು..ನಂತರ ವಿದ್ಯುತ್ ಚಿತಾಗರದತ್ತ ಅವರ ದೇಹವನ್ನು ತೆಗೆದುಕೊಂಡು ಹೋಗಲಾಯು.
ಕುಟುಂಬಸ್ಥರು ಹಾಗೂ ಸಂಬಂಧಿಕರು ಅಂತಿಮವಾಗಿ ದರ್ಶನ ಪಡೆದರು. ಅಂತಿಮ ವಿಧಿ ವಿಧಾನಗಳನ್ನು ಪತಿ ಹಾಗೂ ನಟ ವಿಜಯರಾಘವೇಂದ್ರ ಹಾಗೂ ಪುತ್ರ ಶೌರ್ಯ ನೆರವೇರಿಸಿ ಅವರ ಮೃತ ದೇಹಕ್ಕೆ ಅಗ್ನಿಸ್ಪರ್ಶ ಮಾಡಿದರು.
ಸ್ಪಂದನಾ ತಂದೆ ಬಿ ಕೆ ಶಿವರಾಂ, ಸಹೋದರ ರಕ್ಷಿತ್ ಶಿವರಾಂ, ಚಿಕ್ಕಪ್ಪ ಬಿ ಕೆ ಹರಿಪ್ರಸಾದ್, ಮಾವ ಚಿನ್ನೇಗೌಡರು, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ಮೈದುನ ಶ್ರೀ ಮುರಳಿ, ಮುರಳಿ ಪತ್ನಿ ವಿದ್ಯಾ, ವಿಜಯ್ ರಾಘವೇಂದ್ರ ಸಹೋದರಿ ವೀಣಾ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಉಪಸ್ಥಿತರಿದ್ದರು.