ಬ್ರಹ್ಮಾವರ : ಕೆಲಸ ಹುಡುಕಿಕೋ ಎಂದು ಬುದ್ಧಿವಾದ ಹೇಳಿದ್ದಕ್ಕೆ ಮಗನೊಬ್ಬ ಅಪ್ಪ ಅಮ್ಮನನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಇಲ್ಲಿನ ಹಂದಾಡಿ ಗ್ರಾಮದ ಅಮ್ಮ ಶಾಮಿಯಾನ ಹತ್ತಿರ ನಿವಾಸಿ ಜಯರಾಮ ಶೆಟ್ಟಿ ಹಾಗೂ ಹೆಂಡತಿ ಪೂರ್ಣಿಮಾ ಶೆಟ್ಟಿ ಇಬ್ಬರೂ ಶಿಕ್ಷಕರಾಗಿದ್ದಾರೆ. ಇವರ ಪುತ್ರ ರಜತ್ ಶೆಟ್ಟಿ ಕೆಲಸ ಮಾಡದೇ ಮನೆಯಲ್ಲಿ ಇದ್ದನು. ತಂದೆ ತಾಯಿ ಆತನಿಗೆ ಬುದ್ದಿ ಹೇಳಿ ಕೆಲಸ ಹುಡುಕಿಕೊಳ್ಳುವಂತೆ ಆಗಾಗ್ಗೆ ಹೇಳುತ್ತಿದ್ದರು.
ಅದರಂತೆ ಮೊನ್ನೆ ಜಯರಾಮ ಶೆಟ್ಟಿ ಹಾಗೂ ಪೂರ್ಣಿಮಾ ದಂಪತಿ ಕೆಲಸ ಮುಗಿಸಿ ಮನೆಗೆ ಬಂದಿದ್ದು, ಈ ವೇಳೆ ರಜತ್ ಶೆಟ್ಟಿ, ತಂದೆತಾಯಿಗೆ ಅವಾಚ್ಯವಾಗಿ ಬೈದು ಏಕಾಏಕಿ ತನ್ನ ತಾಯಿಯ ಸೀರೆ ಹಾಗೂ ಕುತ್ತಿಗೆಯಲ್ಲಿದ್ದ ಕರಿಮಣಿ ತಾಳಿಯನ್ನು ಎಳೆದು ತುಂಡು ಮಾಡಿ ಕೈಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಬಳಿಕ ಕತ್ತಿಯನ್ನು ಹಿಡಿದುಕೊಂಡು ಇಬ್ಬರನ್ನು ಕೊಲೆ ಮಾಡುವುದಾಗಿ ಓಡಿಸಿಕೊಂಡು ಬಂದಿದ್ದಾನೆ. ಈ ಹಲ್ಲೆಯಿಂದ ಗಾಯಗೊಂಡಿರುವ ಪೂರ್ಣಿಮಾ ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.