ಬೆಂಗಳೂರು: ಸ್ಯಾಂಡಲ್ವುಡ್ ಗಾಯಕ ವಾಸುಕಿ ವೈಭವ್ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸ್ನೇಹಿತರೊಂದಿಗೆ ಕಾಂತಾರ ಸಿನಿಮಾ ನೋಡಲು ಹೋಗಿದ್ದಾರೆ. ಈ ಸಮಯದಲ್ಲಿ ನಾಲ್ಕೈದು ಮಂದಿ ವಾಸುಕಿ ಮತ್ತು ಸ್ನೇಹಿತರ ಜೊತೆ ಗಲಾಟೆ ಮಾಡಿದ್ದಲ್ಲದೇ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ವಾಸುಕಿ ಮತ್ತು ಸ್ನೇಹಿತರು ಮೊದಲೇ ಸಿನಿಮಾ ಟಿಕೆಟ್ ತೆಗೆದುಕೊಂಡು ಮೊದಲು ಸೀಟಿನಲ್ಲಿ ಕುಳಿತಿದ್ದರು. ಈ ವೇಳೆ ವಾಸುಕಿ ಕುಳಿತಿದ್ದ ಸೀಟ್ ಮುಂದೆ ಹೋಗಲು ನಾಲ್ಕೈದು ಮಂದಿ ಗುಂಪಿನಲ್ಲಿ ಬಂದಿದ್ದಾರೆ. ನಿಧಾನವಾಗಿ ನಡೆಯುತ್ತಿದ್ದ ಕಾರಣ ಬೇಗ ಬೇಗ ಹೋಗುವಂತೆ ವಾಸುಕಿ ಸ್ನೇಹಿತರು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ನಾಲ್ಕೈದು ಮಂದಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಪರಿಸ್ಥಿತಿ ಹದಗೆಡುತ್ತಿದ್ದಂತೆ ವಾಸುಕಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ದೂರು ನೀಡಿದ್ದಾರೆ. ಪೊಲೀಸರು ಎರಡೂ ಗುಂಪಿನ ನಡುವೆ ಸಂಧಾನ ನಡೆಸಿದ್ದಾರೆ. ಬಳಿಕ ವಾಸುಕಿ ವೈಭವ್ ಸ್ನೇಹಿತರಿಗೆ ಗುಂಪು ಕ್ಷಮೆ ಕೇಳಿ ಕ್ಷಮೆ ಪತ್ರ ಬರೆದುಕೊಟ್ಟಿದ್ದಾರೆ.