ಬೆಂಗಳೂರು: ಒಂದೇ ತಿಂಗಳಿನಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಇಬ್ಬರೂ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಎರಡು ದಿನಗಳ ಅಧಿಕೃತ ರಾಜ್ಯ ಭೇಟಿಗಾಗಿ ಜೂನ್ 13 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಸೋಮವಾರ ಬೆಳಿಗ್ಗೆ ಬೆಂಗಳೂರು ತಲುಪಲಿರುವ. ರಾಷ್ಟ್ರಪತಿ, ನಂತರ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅಂದು ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಜೂನ್ 14 ರಂದು ಬೆಳಿಗ್ಗೆ ಬೆಂಗಳೂರಿನ ಕನಕಪುರ ರಸ್ತೆ ಸಮೀಪದ ದೊಡ್ಡಕಲ್ಲಸಂದ್ರದ ವೈಕುಂಠ ಬೆಟ್ಟದಲ್ಲಿ ತಿರುಪತಿ ತಿರುಮಲ ದೇವಾಲಯವನ್ನು ಹೋಲುವ ಇಸ್ಕಾನ್ ದೇಗುಲದ ಲೋಕಾರ್ಪಣಾ ಸಮಾರಂಭದಲ್ಲಿ ರಾಮ್ ನಾಥ್ ಕೋವಿಂದ್ ಭಾಗವಹಿಸಲಿದ್ದಾರೆ.
14 ರಂದೇ ಅಪರಾಹ್ನ ರಾಷ್ಟ್ರಪತಿಗಳು ಬೆಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 20 ರಂದು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
ಜೂನ್ 20 ರಂದು ಬೆಂಗಳೂರಿನಲ್ಲಿ ಹದಿನೈದು ಸಾವಿರ ಕೋಟಿ ರೂಪಾಯಿ ವೆಚ್ಚದ ಸಬ್ ಅರ್ಬನ್ ರೈಲು ಯೋಜನೆಗೆ ಅಡಿಗಲ್ಲು ಸಮಾರಂಭದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.
ಜೂನ್ 21 ರಂದು ಬೆಳಗ್ಗೆ ಮೈಸೂರಿನಲ್ಲಿ ಅರಮನೆ ಮುಂಭಾಗ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ, ಅಂದೇ ಮೈಸೂರಿನಿಂದ ದೆಹಲಿಗೆ ವಾಪಸಾಗಲಿದ್ದಾರೆ.