ಬೆಂಗಳೂರು: ಈಡಿಗ ಸಮುದಾಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ವಿರುದ್ಧ ಪ್ರಣವಾನಂದ ಸ್ವಾಮೀಜಿ ಟೀಕೆ ಮಾಡುವುದನ್ನು ಕೈ ಬಿಡಬೇಕು ಎಂದು ಬಿಜೆಪಿ ಓಬಿಸಿ ಮೋರ್ಛಾ ರಾಜ್ಯ ಕಾರ್ಯದರ್ಶಿ ವಿಠ್ಠಲ ಪೂಜಾರಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ವಿಠ್ಠಲ ಪೂಜಾರಿ, ಪ್ರಣವಾನಂದ ಸ್ವಾಮೀಜಿ ಈಡಿಗ ಸಮಾಜವನ್ನು ಒಡೆಯದೇ ಮುನ್ನಡೆಸಬೇಕು. ಅಲ್ಲದೇ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈಡಿಗ ಸಮಾಜದಿಂದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ಅವರಿಗೆ ಬಹು ದೊಡ್ಡ ಖಾತೆಗಳನ್ನು ನೀಡಿ ಈಡಿಗ ಸಮುದಾಯಕ್ಕೆ ಗೌರವ ಸಲ್ಲಿಸಿದೆ ಎಂದು ಹೇಳಿದ್ದಾರೆ.
ಸಿಕ್ಕ ಸಿಕ್ಕಲ್ಲಿ ಸಚಿವರನ್ನು ಹೀಗೆಳೆಯುವುದು, ಅಪಮಾನದ ಮಾತಾಡುವುದು, ಸಚಿವದ್ವಯರ ಬಗ್ಗೆ ಕೆಟ್ಟ ಸಂದೇಶ ಬಿತ್ತುವ ವಾತಾವರಣ ನಿರ್ಮಿಸುವುದು ಸಮಾಜದ ಸಂಘಟನೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದಿರುವ ವಿಠ್ಠಲ ಪೂಜಾರಿ, ಶೇಂದಿ ನಿಷೇಧ ರದ್ದತಿ ಬಗ್ಗೆ ಮಾತನಾಡುವಾಗ ಸಚಿವರನ್ನು ಉಲ್ಲೇಖಿಸುವುದು ಶೋಭೆಯಲ್ಲ ಎಂದು ತಿಳಿಸಿದ್ದಾರೆ.
ಸತ್ಯ ತಿಳಿದು ಮಾತನಾಡಬೇಕಾದ ಅವಶ್ಯಕತೆ ಇದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸಚಿವರ ಕುರಿತು ಇಲ್ಲಸಲ್ಲದ ಟೀಕೆ ಸಾರ್ವಜನಿಕವಾಗಿ ಮಾಡುತ್ತಾ ಹೋದರೆ ಈಡಿಗ-ಬಿಲ್ಲವ ಸಮಾಜವನ್ನು ಒಡೆದಂತಾಗುತ್ತದೆ. ಇದರ ಜೊತೆಗೆ ಸಂಘಟನೆಯ ಕಾರ್ಯ ಸಾಧನೆಯಾಗದೇ ಪ್ರಚಾರಕ್ಕಾಗಿ ಹೇಳಿಕೆ ನೀಡಿದಂತಾಗುತ್ತದೆ. ಪ್ರಣವಾನಂದ ಸ್ವಾಮೀಜಿ ಸಚಿವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.