ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಎರಡು ವಿದ್ಯಾರ್ಥಿ ತಂಡಗಳ ನಡುವೆ ನಡೆಯುತ್ತಿದ್ದ ಹೊಡೆದಾಟವನ್ನು ಪೊಲೀಸರು ತಡೆದಿದ್ದಾರೆ.
ಗುರುವಾರ ಸಂಜೆ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಯೋರ್ವ ದ್ವಿತೀಯ ಪಿಯು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿ ಶುಕ್ರವಾರ ಎರಡು ಕಡೆಯ ವಿದ್ಯಾರ್ಥಿಗಳ ಬೆಂಬಲಿಗರು ಜಮಾಯಿಸಿ ಹೊಡೆದಾಟಕ್ಕೆ ಸಿದ್ಧರಾಗಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಎಸ್ ಐ ರಾಜೇಶ್ ಕೆ.ವಿ. ಹೆಚ್ಚುವರಿ ಪೊಲೀಸ್ ಪಡೆಯೊಂದಿಗೆ ಕಾಲೇಜಿಗೆ ಧಾವಿಸಿ ಗಲಾಟೆಗೆ ತಯಾರಾಗಗಿದ್ದ ವಿದ್ಯಾರ್ಥಿಗಳನ್ನು ಚದುರಿಸಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಳಿಕ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವರವರ ಹೆತ್ತವರೊಂದಿಗೆ ಪ್ರಾಂಶುಪಾಲರನ್ನು ಭೇಟಿ ಮಾಡಲು ಸೂಚಿಸಿ ಮುಚ್ಚಳಿಕೆ ಪತ್ರ ಬರೆದ ಬಳಿಕವೇ ತರಗತಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು. ಮತೀಯ ಸಂಘರ್ಷಕ್ಕೆ ಕಾರಣವಾಗಬಹುದಾದ ವಿದ್ಯಾರ್ಥಿಗಳ ಈ ಅವಿವೇಕಿತನದ ವರ್ತನೆ ಪೊಲೀಸರ ಸಕಾಲಿಕ ಕ್ರಮದಿಂದ ನಿಯಂತ್ರಿಸಲ್ಪಟ್ಟಂತಾಗಿದೆ.