ಮಂಗಳೂರು; ನನ್ನ ಗಂಡನನ್ನು ಹುಡುಕಿಕೊಡಿ ಎಂದು ಯುವತಿಯೊಬ್ಬಳು ಪೊಲೀಸರ ಮೊರೆ ಹೋಗಿದ್ದಾಳೆ.
ಶಿವಮೊಗ್ಗ ಮೂಲದ ಗಾಡಿಕೊಪ್ಪದ ಯುವತಿ ಮೇಘಶ್ರೀ ಎಂಬಾಕೆಗೆ ಇನ್ಸ್ಟಾಗ್ರಾಂನಲ್ಲಿ ಮಂಗಳೂರಿನ ವಾಮಂಜೂರು ನೀರಾಳ ಬೊಂಡಂತಿಲದ ನಿವಾಸಿ ಲಿಖಿತ್ ಎಂಬಾತನ ಪರಿಚಯವಾಗಿ ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈಗ ತನ್ನನ್ನು ಮನೆಗೆ ಸೇರಿಸಿಕೊಳ್ಳದೇ ಹೊರದಬ್ಬಿ ಪರಾರಿಯಾಗಿದ್ದಾನೆ. ತನ್ನ ಗಂಡನನ್ನು ಹುಡುಕಿಕೊಡಿ ಎಂದು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆ ಮೆಟ್ಟಲೇರಿದ್ದಾಳೆ.
ಲಿಖಿತ್ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದ. ಆ ಸಂದರ್ಭ ಬಂಗಾರ, ಹಣ ಎಲ್ಲಾ ಕೊಟ್ಟಿದ್ದೇವೆ. ಈಗ ಗಂಡನ ಮನೆ ಹತ್ತಿರ ಹೋದರೆ ಅವರ ಅಪ್ಪ, ಅಮ್ಮ ನನ್ನನ್ನು ಹತ್ತಿರ ಸೇರಿಸುತ್ತಿಲ್ಲ ಎಂದು ಮೇಘಶ್ರೀ ದೂತಿನಲ್ಲಿ ತಿಳಿಸಿದ್ದಾಳೆ.
ಜುಲೈ 2ರಂದು ತನ್ನನ್ನು ಮದುವೆಯಾಗಿರುವ ಲಿಖಿತ್ ಉರ್ವ ಮಠದ ಕಿಣಿ ಬಳಿ ಬಾಡಿಗೆ ಮನೆ ಮಾಡಿ ಮೊದಲು ಚೆನ್ನಾಗಿಯೇ ನೋಡಿಕೊಂಡಿದ್ದ. ಬಳಿಕ ತನ್ನನ್ನು ದೂರ ಮಾಡತೊಡಗಿದ್ದಾನೆ ಎಂದು ದೂರಿದ್ದಾಳೆ.
ತನಗೆ ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಲ್ಲದೇ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನನ್ನ ಗಂಡನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆತನನ್ನು ಹುಡುಕಿ ಒಂದಾಗಿಸಿ ತನಗೆ ನ್ಯಾಯ ಕೊಡಿಸಿ ಎಂದು ಪೊಲೀಸರಿಗೆ ಮೊರೆ ಇಟ್ಟಿದ್ದಾಳೆ.
ಮಗಳು ಚೆನ್ನಾಗಿರಲಿ ಎಂದು ಫ್ಲ್ಯಾಟ್ ಮಾಡಿ ಕೊಡಿಸಿ ಎಲ್ಲಾ ವ್ಯವಸ್ಥೆ ಮಾಡಿದರೂ ಆತ ಮಗಳನ್ನು ಚೆನ್ನಾಗಿ ನೋಡಿಕೊಳ್ಳದೇ ಹಿಂಸೆ ನೀಡತೊಡಗಿದ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ.ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಮೇಘಾ ತಾಯಿ ಜಯಲಕ್ಷ್ಮೀ ಕೂಡಾ ಒತ್ತಾಯಿಸಿದ್ದಾರೆ. ಈ ಬಗ್ಗೆ ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿರುವ ಅಧಿಕಾರಿಗಳು ಲಿಖಿತ್ ವಿರುದ್ಧ ಎಫ್ಐಆರ್ ದಾಖಲಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.