ಕಡಬ : ಐತೂರು ಗ್ರಾಮ ಪಂಚಾಯತ್ ಕಛೇರಿ ಒಳಗಡೆ ಅನುಮತಿ ಪಡೆಯದೆ ಕರ್ತವ್ಯದ ವೇಳೆ ವಿಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಿದ ವಿರುದ್ಧ ಪಿಡಿಓ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ಮಾಲೀಕ ಸಂತೋಷ್ ರೈ ಮರ್ದಾಳರನ್ನು ಪೊಲೀಸ್ ಠಾಣೆಗೆ ಕರೆಸಿ ವಿಡಿಯೋ ದೃಶ್ಯವನ್ನು ಡಿಲೀಟ್ ಮಾಡಿಸಿದ ಘಟನೆ ನಡೆದಿದೆ.
ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ಕಛೇರಿ ಒಳಗೆ ಬಂದು ಖಾಸಗಿ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ಮಾಲೀಕನಾಗಿರುವ ಕಡಬದ ಮರ್ದಾಳ ನಿವಾಸಿ ಸಂತೋಷ್ ರೈ ಎಂಬವರು ಪಿಡಿಓ ಸುಜಾತ ಕೆ. ಅವರು ಸಾರ್ವಜನಿಕ ಕರ್ತವ್ಯದಲ್ಲಿದ್ದ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಲ್ಲದೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ” ದರ್ಪ, ಸ್ವಾರ್ಥ ,ವಿವಾದಗಳ ಕೇಂದ್ರ ಐತ್ತೂರು ಗ್ರಾಮ ಪಂಚಾಯತ್ ಕರ್ಮಕಾಂಡ”ಎಂಬ ಶೀರ್ಷಿಕೆಯಡಿಯಲ್ಲಿ ಬರಹ ಬರೆದು ಅಪ್ಲೋಡ್ ಮಾಡಿ ಪಿಡಿಓ ಮತ್ತು ಗ್ರಾಮ ಪಂಚಾಯತ್ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕುರಿತು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪಿಡಿಓ ಸುಜಾತ ಅವರು ನೀಡಿದ್ದ ದೂರಿನಂತೆ ಕಡಬದ ಖಾಸಗಿ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲಿನ ಮಾಲೀಕ ಸಂತೋಷ್ ರೈ ಎಂಬವರನ್ನು ಠಾಣೆಗೆ ಕರೆಸಿದ ವಿಚಾರಣೆಗೊಳಪಡಿಸಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ತುಣಕನ್ನು ಸ್ಥಳದಲ್ಲಿಯೇ ಡಿಲೀಟ್ ಮಾಡಿಸಿ ಸೂಕ್ತ ಎಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ.