ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯ ಆಯ್ಕೆಯ ಕಗ್ಗಂಟನ್ನು ವಿರೋಧ ಪಕ್ಷಗಳು ಕೊನೆಗೂ ಬಿಡಿಸಿವೆ. ಅವರ್ ಬಿಟ್, ಇವರ್ ಬಿಟ್ ಇನ್ಯಾರು ಎಂದು ಅಭ್ಯರ್ಥಿ ಆಯ್ಕೆಗೆ ಹುಡುಕಾಟ ನಡೆಸಿದ್ದ ವಿಪಕ್ಷಗಳು, ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಿವೆ. ಇದರೊಂದಿಗೆ ರಾಷ್ಟ್ರಪತಿ ಚುನಾವಣೆ ರಂಗು ಪಡೆಯುವ ಸುಳಿವು ಸಿಕ್ಕಿದೆ.
ಎನ್ಸಿಪಿ ನಾಯಕ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮತ್ತು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ವಿರೋಧ ಪಕ್ಷಗಳು ಸೂಚಿಸಿದ್ದವು. ಆದರೆ ಈ ಮೂವರೂ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ಬಯಸಿರಲಿಲ್ಲ. ಇದರಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಜಂಟಿ ಅಭ್ಯರ್ಥಿ ಆಯ್ಕೆ ಕಸರತ್ತು ಕುತೂಹಲ ಮೂಡಿಸಿತ್ತು.
ಇಂದು ದಿಲ್ಲಿಯಲ್ಲಿ ಸಭೆ ಸೇರಿದ ವಿಪಕ್ಷಗಳು ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿವೆ. ಸಿನ್ಹಾ ಅವರ ಹೆಸರಿಗೆ ಶರದ್ ಪವಾರ್ ಒಪ್ಪಿಗೆ ಸೂಚಿಸಿದ್ದಾರೆ. ಕಾಂಗ್ರೆಸ್, ಎನ್ಸಿಪಿ, ಟಿಎಂಸಿ, ಸಿಪಿಐ, ಸಿಪಿಎಂ, ಸಮಾಜವಾದಿ ಪಕ್ಷ, ನ್ಯಾಷನ್ ಕಾನ್ಫರೆನ್ಸ್, ಎಐಎಂಐಎಂ, ಆರ್ಜೆಡಿ ಮತ್ತು ಎಐಯುಡಿಎಫ್ ಸೇರಿದಂತೆ ವಿವಿಧ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದು, ಅವರೂ ಸಿನ್ಹಾ ಅವರ ಉಮೇದುವಾರಿಕೆಗೆ ಬೆಂಬಲ ಘೋಷಿಸಿವೆ.
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ನಾವು ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತ್ತು ಇನ್ನಷ್ಟು ಹಾನಿ ಮಾಡುವುದರಿಂದ ಮೋದಿ ಸರ್ಕಾರವನ್ನು ತಡೆಯಲು ನಿರ್ಧರಿಸಿದ್ದೇವೆ. ಅದಕ್ಕೆ ಪೂರಕವಾಗಿ ಇಂದು ನಡೆದ ಸಭೆಯಲ್ಲಿ ಯಶವಂತ್ ಸಿನ್ಹಾ ಅವರನ್ನು ಸಾಮಾನ್ಯ ಅಭ್ಯರ್ಥಿಯಾಗಿ ನಾವು ಆಯ್ಕೆ ಮಾಡಿದ್ದೇವೆ” ಎಂದು ಕಾಂಗ್ರೆಸ್ನ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿರುವ ವಿಪಕ್ಷಗಳು, ಇದರಿಂದ ಅವಿರೋಧವಾಗಿ ಆಯ್ಕೆಯಾಗುವ ಯೋಗ್ಯ ರಾಷ್ಟ್ರಪತಿಯನ್ನು ದೇಶ ಪಡೆದುಕೊಳ್ಳಲು ಸಾಧ್ಯ ಎಂದು ಎಂದು ಜಂಟಿ ಹೇಳಿಕೆ ತಿಳಿಸಿದೆ. ಯಶವಂತ್ ಸಿನ್ಹಾ ಪರ ಪ್ರಚಾರ ನಡೆಸಲು ಸಮಿತಿಯೊಂದನ್ನು ಕೂಡ ರಚನೆ ಮಾಡಲಾಗಿದೆ.