ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬೆಳಗೋಡು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಒಲೆ ಪಕ್ಕ ಮಲಗಿದ್ದ ತಂದೆಗೆ ಮಗ ಕರೆದರೂ ಎಚ್ಚರವಾಗಿಲ್ಲ. ಈ ವೇಳೆ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಿಂದ ಅಪ್ಪನಿಗೆ ಹೊಡೆದು ಆತನನ್ನು ಕೊಂದಿದ್ದಾನೆ.
ಮೃತ ದುರ್ದೈವಿಯನ್ನ 63 ವರ್ಷದ ಬಾಸಯ್ಯ ಎಂದು ಗುರುತಿಸಲಾಗಿದೆ. 33 ವರ್ಷದ ಮಂಜುನಾಥ್ ಅಪ್ಪನನ್ನೇ ಕೊಲೆಗೈದ ಪುತ್ರ. ಮೃತ ಬಾಸಯ್ಯನಿಗೆ ಇಬ್ಬರು ಮಕ್ಕಳು ಹಿರಿಯ ಮಗ ಬಣಕಲ್ ಬಳಿ ಹಳ್ಳಿಯೊಂದರಲ್ಲಿ ವಾಸವಿದ್ದಾನೆ. ಕಿರಿಯ ಮಗ ಮಂಜುನಾಥ್ಗೆ ಮದುವೆಯಾಗಿಲ್ಲ. ಬಾಸಯ್ಯನ ಪತ್ನಿ ಹಾಸಿಗೆ ಹಿಡಿದಿದ್ದಾರೆ. ಹಾಗಾಗಿ, ಅಪ್ಪ-ಮಗನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು.
ನಿನ್ನೆ ಸಂಜೆ ಇಬ್ಬರು ಕೂಲಿ ಮುಗಿಸಿಕೊಂಡು ಬಂದಿದ್ದರು. ಅಪ್ಪ ಅಡುಗೆ ಮಾಡುವ ಒಲೆ ಪಕ್ಕದಲ್ಲಿ ಮಲಗಿದ್ದ. ತಡವಾಗಿ ಮನೆಗೆ ಬಂದ ಮಗ ಅಪ್ಪನನ್ನ ಅಡುಗೆ ಮಾಡಲು ಹೇಳಿದಾಗ ಎದ್ದಿಲ್ಲ. ಈ ಕಾರಣಕ್ಕೆ ಎಣ್ಣೆ ಏಟಲ್ಲಿ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಲ್ಲಿ ಅಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. .
ನಂತರ ಅಪ್ಪ ಎದ್ದಿದ್ದ. ಆದರೆ, ಏನೂ ಆಗಿರಲಿಲ್ಲ.ಬಳಿಕ ಮಗನೇ ಅಡುಗೆ ಮಾಡಿ ಅಪ್ಪನಿಗೆ ಊಟ ಹಾಕಿ ಮಲಗಿಸಿದ್ದಾನೆ. ಆದರೆ, ಬೆಳಗ್ಗೆ ಏಳು ಗಂಟೆಗೆ ಎದ್ದು ನೋಡಿದಾಗ ಅಪ್ಪನ ತಲೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದರು. ಬಳಿಕ ಮಗನೇ ಊರಿನ ಜನರಿಗೆ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮಂಜುನಾಥ್ನನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.