Saturday, June 6, 2026
Homeಕರಾವಳಿ ನೆಲ್ಯಾಡಿ: ತಹಶೀಲ್ದಾರ್ ರಿಂದ ಹೆದ್ದಾರಿ ಪಕ್ಕ ನಿರ್ಮಿತವಾಗಿದ್ದ ಅಕ್ರಮ ಕಟ್ಟಡದ ತೆರವು:ತೆರವು ಮಾಡುವಂತೆ ನಾಟಕವಾಡಿದರೆ ಸರ್ಕಾರಿ ಅಧಿಕಾರಿಗಳು ?

 ನೆಲ್ಯಾಡಿ: ತಹಶೀಲ್ದಾರ್ ರಿಂದ ಹೆದ್ದಾರಿ ಪಕ್ಕ ನಿರ್ಮಿತವಾಗಿದ್ದ ಅಕ್ರಮ ಕಟ್ಟಡದ ತೆರವು:ತೆರವು ಮಾಡುವಂತೆ ನಾಟಕವಾಡಿದರೆ ಸರ್ಕಾರಿ ಅಧಿಕಾರಿಗಳು ?

- Advertisement -
- Advertisement -

ನೆಲ್ಯಾಡಿ:  ಮಂಗಳೂರು-ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಲಾವತ್ತಡ್ಕ ಎಂಬಲ್ಲಿ ಗುಂಡ್ಯ ನದಿಗೆ ಅಕ್ರಮವಾಗಿ ಮಣ್ಣು ತುಂಬಿಸಿ ನದಿ ಒತ್ತುವರಿ ಮಾಡಿಕೊಂಡು ನಡೆಸುತ್ತಿದ್ದ ಜನನಿ ಎಂಬ ಹೆಸರಿನ ಹೋಟೆಲ್ ನ್ನು ಕಡಬ ತಹಶೀಲ್ದಾರ್ ರಮೇಶ್ ಬಾಬು ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ.

ಹಲವು ವರ್ಷಗಳಿಂದ ಇಚಿಲಂಪಾಡಿಯ ಸತೀಶ್ ಎಂಬಾತ ಹೋಟೆಲ್ ನ ಹೆಸರಿನಲ್ಲಿ ನಡೆಸುತ್ತಿದ್ದ ಅಕ್ರಮ ವ್ಯವಹಾರಗಳ ಕುರಿತು ಅನೇಕ ಬಾರಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ದಾಳಿ ನಡೆಸಿದಾಗ ಅಕ್ರಮ ಮದ್ಯ, ನದಿಯಲ್ಲಿ ಮೀನು ಹಿಡಿಯಲು ಬಳಸುವ ಸ್ಪೋಟಕವನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಹಿಂದೆ ಸಣ್ಣ ತಳ್ಳುಗಾಡಿಯಲ್ಲಿ ನಡೆಯುತ್ತಿದ್ದ ಹೋಟೆಲ್, ಕ್ರಮೇಣ ನದಿಯ ದಡಕ್ಕೆ ಮಣ್ಣು ಹಾಕಿ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿದ ದೊಡ್ಡ ಕಟ್ಟಡದಲ್ಲಿ ಪ್ರಾರಂಭವಾಗಿತ್ತು. ಈ ಕಟ್ಟಡಕ್ಕೆ ನೂಜಿಬಾಳ್ತಿಲ ಪಂಚಾಯತ್ ನಿಂದ ಪರವಾನಿಗೆ ಮತ್ತು ವಿದ್ಯುತ್ ಕನೆಕ್ಷನ್ ಗೆ NOC ಕೂಡ ನೀಡಲಾಗಿತ್ತು. ಈ ಕುರಿತು ಸಾರ್ವಜನಿಕರು ಮತ್ತು ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಅಕ್ರಮ ಮದ್ಯ ಸೇವಿಸಿ ಮೃತ ಪಟ್ಟಿದ್ದ ವ್ಯಕ್ತಿಗಳ ಮನೆಯವರು ಸಂಬಂಧ ಪಟ್ಟ ಅಧಿಕಾರಿಗಳಿಗೆ 2018ರಲ್ಲಿ ದೂರು ನೀಡಿದ್ದರು. ಆದರೆ ಅ ದೂರನ್ನು ನಿರ್ಲಕ್ಷಿಸಲಾಗಿತ್ತು.

ನಂತರ 2020ರಲ್ಲಿ ಮತ್ತೆ ಅಂಗಡಿಯ ಅಕ್ರಮಗಳ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ನಂತರ  ನೂಜಿಬಾಳ್ತಿಲ ಪಂಚಾಯತ್ ನ ಆಗಿನ ಪಿಡಿಓ, ಕಡಬ ತಹಶೀಲ್ದಾರ್, ನೆಲ್ಯಾಡಿ ಮೆಸ್ಕಾಂ , ಗಣಿ ಮತ್ತು ಭೂವಿಜ್ಞಾನ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ದೂರನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಇಂದು ಮಧ್ಯಾಹ್ನ ಕಡಬ ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಹೋಟೆಲ್ ನ ಕಟ್ಟಡದ ಬಾಗಿಲು ತೆರವುಗೊಳಿಸಲಾಗಿದೆ.

ಕಾಟಾಚಾರದ ತೆರವು ?

ತೆರವುಗೊಳಿಸಲೆಂದು ಜೆಸಿಬಿ ಸಮೇತ ಬಂದಿದ್ದ ಅಧಿಕಾರಿಗಳು ಕಟ್ಟಡದ ಎದುರಿನ ಬಾಗಿಲು ಮತ್ತು ಕೆಲವು ಸಿಮೆಂಟ್ ಶೀಟ್ ಗಳನ್ನಷ್ಟೇ ಜೆಸಿಬಿಯಲ್ಲಿ ಮುಟ್ಟಿದ್ದಾರೆ.  ಅಕ್ರಮವಾಗಿ ನಿರ್ಮಿಸಿರುವ ಈ ಕಟ್ಟಡವನ್ನು ಪೂರ್ಣವಾಗಿ ನೆಲಸಮ ಮಾಡುವ ಬದಲು ಮೇಲಿಂದ ಮೇಲೆ ಜೆಸಿಬಿಯಿಂದ ಕೆಲಸ ಮಾಡಿಸಿದ್ದರಿಂದ ಸಾರ್ವಜನಿಕರಿಗೆ ಅಧಿಕಾರಿಗಳ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.

ಹಲವು ಬಾರಿ ಈ ಕಟ್ಟಡದ ವಿರುದ್ಧ ದೂರು ದಾಖಲಾದಾಗಲೂ ಸ್ಥಳೀಯ ರಾಜಕೀಯ ನಾಯಕರ ಮತ್ತು ಕೆಲವು ಸರಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ದೂರುಗಳನ್ನು ನಿರ್ಲಕ್ಷಿಸಲಾಗಿತ್ತು. ಈ ಬಾರಿ  ತೆರವುಗೊಳಿಸಲು ಆದೇಶ ಇದ್ದರೂ ಕಾಟಾಚಾರಕ್ಕೆ ಅಧಿಕಾರಿಗಳು ಆದೇಶ ಪಾಲಿಸುವಂತೆ ನಾಟಕವಾಡಿದ್ದಾರೆ ಎಂದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ.

- Advertisement -

Latest News

error: Content is protected !!