ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಯೇನಪೋಯಾ ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ಆಸ್ಕರ್ ರನ್ನು ನೋಡಿದ ಬಳಿಕ ಕಟೀಲ್ ಕುಟುಂಬಸ್ಥರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.
ನಳಿನ್ ಕುಮಾರ್ ಕಟೀಲ್ ಜೊತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೂಡಾ ಆಸ್ಕರ್ ಫರ್ನಾಂಡೀಸ್ ಆರೋಗ್ಯ ವಿಚಾರಿಸಿದ್ದಾರೆ. ಆಸ್ಕರ್ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಆಸ್ಕರ್ ಒಬ್ಬ ಹಿರಿಯ ರಾಜಕೀಯ ಮುತ್ಸದ್ದಿ, ಸಜ್ಜನಿಕೆಯ ರಾಜಕಾರಣಿ, ಹಿಂದಿಗಿಂತ ಇವತ್ತು ಇವರ ಆರೋಗ್ಯ ಸುಧಾರಿಸ್ತಾ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಆಸ್ಕರ್ ಶೀಘ್ರ ಗುಣಮುಖರಾಗಿ ಹೊರಗೆ ಬರಲಿ ಅಂತ ಪ್ರಾರ್ಥನೆ ಮಾಡುತ್ತೇವೆ, ರಾಜ್ಯಸಭೆಯಲ್ಲಿ ದೇಶಕ್ಕೆ ಅವರ ಮಾರ್ಗದರ್ಶನ ಸಿಗಲಿ, ವೈದ್ಯರ ಜೊತೆಗೂ ಮಾತನಾಡಿದ್ದೇವೆ, ಅವರ ಆರೋಗ್ಯ ಸುಧಾರಿಸುತ್ತಾ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.