ಉಡುಪಿ: ಪರಶುರಾಮ ಥೀಂ ಪಾರ್ಕ್ ಬಳಿಯಲ್ಲಿ ಸ್ಥಳೀಯವಾಗಿ ದೈವ-ದೇವರ ಬಗ್ಗೆ ಕುರುಹು ಇದ್ದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಧಾರ್ಮಿಕ ಮುಖಂಡರೊಂದಿಗೆ ಸೇರಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಈಗಾಗಲೇ ಪರಶುರಾಮ ಪ್ರತಿಮೆಯ ಬಗ್ಗೆ ಶಾಸಕ ಸುನಿಲ್ ಕುಮಾರ್ ಅವರು ಅಪಪ್ರಚಾರ ಮಾಡುತ್ತಿದ್ದು, ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಲು ಕಾಂಗ್ರೆಸ್ ಸರಕಾರ ಅಡ್ಡಿಪಡಿಸುತ್ತಿದೆ ಎಂದು ಹೇಳಿದ್ದಾರೆ.
ಪರಶುರಾಮ ಪ್ರತಿಮೆಯ ನಿರ್ಮಾಣದಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಈ ಒಂದು ಕಾರಣದಿಂದ ಮೂರ್ತಿ ನಿರ್ಮಾಣಕ್ಕೆ ಅಡಚಣೆಯಾಗಬಾರದು. ಈ ನಿಟ್ಟಿನಲ್ಲಿ ಸ್ಥಳೀಯರು, ಧಾರ್ಮಿಕ ಮುಂದಾಳುಗಳ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು. ಪರಶುರಾಮ ಮೂರ್ತಿ ವಿವಾದ ಅಂತ್ಯ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇನ್ನು ಜನರು ವಿಗ್ರಹ ಪ್ರತಿಷ್ಠಾಪನೆಯ ಆರಂಭದಲ್ಲಿಯೇ ನಡೆದಿರುವ ಅನಾಹುತಗಳಿಂದ ಭಯಭೀತರಾಗಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ, ಅಜಿತ್ ಹೆಗ್ಡೆ ಉಪಸ್ಥಿತರಿದ್ದರು