ಮಂಗಳೂರು: ಜಾಗ ಮಾರಾಟಕ್ಕೆ ಸಂಬಂಧಿಸಿ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಲು ಲಂಚ ಪಡೆದ ಆರೋಪದ ಮೇರೆಗೆ ಮಂಗಳೂರು ತಹಶೀಲ್ದಾರ್ ಪುರಂದರ ಹಾಗೂ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಿವಾನಂದ ನಾಟ್ಯಾಕರ್ ಅವರನ್ನು ಲೋಕಾಯುಕ್ತ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ನಗರದ ಕಾವೂರು ನಿವಾಸಿಯೊಬ್ಬರು ಜಾಗ ಮಾರಾಟಕ್ಕೆ ಎನ್ಓಸಿ ನೀಡುವಂತೆ ತಹಶೀಲ್ದಾರ್ಗೆ ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ‘ಕೆಲಸ ಮಾಡಿಕೊಡಬೇಕಾದರೆ ತನಗೆ ಹಾಗೂ ತಹಶೀಲ್ದಾರ್ಗೆ ಲಂಚ ಕೊಡಬೇಕು ಎಂದು ಶಿವಾನಂದ ಬೇಡಿಕೆ ಇಟ್ಟಿದ್ದಾರೆ’ ಎಂಬುದಾಗಿ ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
‘ಅರ್ಜಿದಾರರಿಂದ ₹ 4,700 ಲಂಚದ ಹಣ ಪಡೆದ ಶಿವಾನಂದ ಅವರನ್ನು ಬಂಧಿಸಿದ್ದೇವೆ. ಲಂಚದ ಹಣದಲ್ಲಿ ತಹಶೀಲ್ದಾರ್ ಅವರಿಗೂ ಪಾಲು ಇತ್ತು. ಹಾಗಾಗಿ ತಹಶೀಲ್ದಾರ್ ಪುರಂದರ ಅವರನ್ನೂ ಬಂಧಿಸಿದ್ದೇವೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
‘ಬಂಧಿತರನ್ನು ಕೋರ್ಟ್ಗೆ ಹಾಜರುಪಡಿಸಿದ್ದೇವೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ತಿಳಿಸಿದ್ದಾರೆ. ಪುರಂದರ, ವಿಜಯಪುರ ಜಿಲ್ಲೆ ಗುಣಕಿ ಗ್ರಾಮದವರಾದರೆ, ಶಿವಾನಂದ ಬಂಟ್ವಾಳ ತಾಲೂಕಿನ ಬಿ.ಮೂಡಾ ಗ್ರಾಮದವರು.