ಬೆಳಗಾವಿ: ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ 80 ವರ್ಷದ ವೃದ್ಧೆಯನ್ನು ಬೆಳಗಾವಿ ಉಪನೋಂದಣಾಧಿಕಾರಿಗಳು ಸಬ್ ರಿಜಿಸ್ಟರ್ ಕಚೇರಿಗೆ ಕರೆಸಿಕೊಂಡು ಸಹಿ ಮಾಡಿಸಿಕೊಂಡಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಅಧಿಕಾರಿಗಳ ಸೂಚನೆ ಮೇರೆಗೆ ಕುಟುಂಬಸ್ಥರು ಸ್ಟ್ರೆಚರ್ ಮೇಲೆಯೇ ವೃದ್ಧೆಯನ್ನು ಉಪನೋಂದಣಾಧಿಕಾರಿ ಕಚೇರಿಗೆ ಕರೆತಂದಿದ್ದಾರೆ. ಆಸ್ತಿ ಹಂಚಿಕೆ ಸಂಬಂಧ ಆಸ್ತಿ ಹಕ್ಕು ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ಮಹಾದೇವಿ ಅಗಸಿಮನಿಯ ಹೆಬ್ಬೆಟ್ಟು ಒತ್ತಿ ಸಹಿ ಮಾಡಿ ಬೆಳಗಾವಿಯ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಿತ್ತು. ಆದರೆ, ಮಹಾದೇವಿ ಅನಾರೋಗ್ಯದಿಂದ ಐಸಿಯುನಲ್ಲಿದ್ದ ಕಾರಣ ಉಪನೋಂದಣಿ ಅಧಿಕಾರಿಗೆ ಆಸ್ಪತ್ರೆಗೆ ಬರಲು ಕುಟುಂಬಸ್ಥರು ಮನವಿ ಮಾಡಿದ್ದರು.
ಆದರೆ, ಆಸ್ಪತ್ರೆಗೆ ಬಂದು ವೃದ್ಧೆಯ ಹೆಬ್ಬೆಟ್ಟು ಒತ್ತಿಸಿ ಸಹಿ ಮಾಡಿಸಿಕೊಳ್ಳಲು ಉಪನೋಂದಣಾಧಿಕಾರಿ ಪದ್ಮನಾಭ್ ಗುಡಿ ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹಣ ನೀಡಲು ಒಪ್ಪದ ಕುಟುಂಬಸ್ಥರು ಅಜ್ಜಿಯನ್ನ ಕಚೇರಿಗೆ ಕರೆತಂದಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.