ಮಂಗಳೂರು: ಅಶೋಕ ನಗರದಿಂದ ತನ್ನ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದ ಮಹಿಳೆ ತನ್ನ ಊರಾದ ಗದಗದಲ್ಲಿ ಪತ್ತೆಯಾಗಿದ್ದಾರೆ. ಮದುವೆಯಾಗದೆ ಜತೆಗೆ ವಾಸವಿದ್ದ ನಾಗರಾಜ ಹಾಲಪ್ಪ ಎಂಬಾತನ ಕಿರುಕುಳವೇ ನಾಪತ್ತೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಘಟನೆಯ ವಿವರ:
ಗದಗ ಮೂಲದ ರೇಣುಕಾ ಚೌಡಾಳ (30) ಮತ್ತು ಇಬ್ಬರು ಮಕ್ಕಳೊಂದಿಗೆ ಸೆ.18ರಂದು ಮನೆಯ ಸಾಮಗ್ರಿಗಳೊಂದಿಗೆ ನಾಪತ್ತೆಯಾಗಿದ್ದರು. ಈ ಸಂದರ್ಭ ನಾಗರಾಜ ಹಾಲಪ್ಪ ಊರಿಗೆ ಹೋಗಿದ್ದ. ಹಿಂತಿರುಗಿ ಬಂದಾಗ ಮನೆಯಲ್ಲಿ ಯಾರು ಇರಲಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಮಹಿಳೆ ಮತ್ತು ಮಕ್ಕಳು ಪತ್ತೆಯಾಗದ ಕಾರಣ ಉರ್ವ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಆಕೆಯನ್ನು ಗದಗದಲ್ಲಿ ಪತ್ತೆ ಮಾಡಿ, ಮಂಗಳೂರಿನಲ್ಲಿದ್ದ ಆತನನ್ನೂ ಕರೆಸಿ ವಿಚಾರಣೆ ನಡೆಸಿದಾಗ ‘ಲಿವಿಂಗ್ ಟುಗೆದರ್’ ವಿಚಾರ ಬಯಲಾಗಿದೆ. ಆತ ಆಕೆಯೊಂದಿಗೆ ವಾಸ ಮಾಡುತ್ತೇನೆ ಎಂದು ಹೇಳಿದ್ದು, ಆದರೆ ರೇಣುಕಾ ಮಾತ್ರ ಎಷ್ಟೇ ಕಷ್ಟ ಆದರೂ ನಾನೊಬ್ಬಳೇ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತೇನೆ. ಆತನೊಂದಿಗೆ ವಾಸ ಮಾಡುವುದಿಲ್ಲ ಎಂದು ಠಾಣೆಯಲ್ಲಿ ಹೇಳಿದ ಕಾರಣ ಅವರಿಬ್ಬರನ್ನು ಪ್ರತ್ಯೇಕವಾಗಿರುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.