ಮೈಸೂರು: ರಸ್ತೆಯಲ್ಲಿ ಬಿದ್ದಿದ್ದ 500 ರೂ. ತೆಗೆದುಕೊಳ್ಳಲು ಹೋದ ವ್ಯಕ್ತಿ 1.50 ಲಕ್ಷ ರೂ. ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿ ಕಲ್ಕುಣಿಕೆ ಗ್ರಾಮದ ನಿವಾಸಿ ಗಣೇಶ್, ಡೆಪಾಸಿಟ್ ಮಾಡಿದ್ದ 1.50 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಬರಲು ಬ್ಯಾಂಕ್ಗೆ ಹೋಗಿದ್ದರು.
ಹಣವನ್ನು ಡ್ರಾ ಮಾಡಿದ ಬಳಿಕ ಕೆಲಸ ನಿಮಿತ್ತ ಹತ್ತಿರದ ಪೋಸ್ಟ್ ಆಫೀಸ್ಗೆ ತೆರಳಿದ್ದಾರೆ. ಈ ವೇಳೆ ಗಣೇಶ್ರನ್ನು ಕೆಲ ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ. ಪೋಸ್ಟ್ ಆಫೀಸ್ನಲ್ಲಿ ಕೆಲಸ ಮುಗಿಸಿದ ಗಣೇಶ್, ದಾರಿ ಮಧ್ಯೆ ಶ್ರೀ ಹೋಟೆಲ್ನಲ್ಲಿ ಟೀ ಕುಡಿದು ಹೋಗುವಾಗ ರಸ್ತೆ ಮೇಲೆ 500 ಎಸೆದ ದುಷ್ಕರ್ಮಿಗಳು, ಈ ಹಣ ನಿಮ್ಮದೇನಾ? ಎಂದಿದ್ದಾರೆ.
ಈ ವೇಳೆ ಗಣೇಶ್ 500 ರೂ. ನೋಟನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದಾಗ ಅವರ ಬಳಿಯಿದ್ದ ಹಣದ ಬ್ಯಾಗ್ ಕಸಿದು ದುಷ್ಕರ್ಮಿಗಳು ಅಲ್ಲಿಂದ ಬೈಕ್ ಏರಿ ಪರಾರಿಯಾಗಿದ್ದಾರೆ. ತಕ್ಷಣ ಗಣೇಶ್ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.