ಡೆಹ್ರಾಡೂನ್: ಬಯಸಿದ ಪ್ರೀತಿ ಸಿಗದೇ ಇದ್ದಾಗ ಅನೇಕರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಸಾವಿನ ದಾರಿ ಹಿಡಿದ ಅದೆಷ್ಟೋ ಪ್ರಕರಣಗಳನ್ನು ನಾವು ನೋಡಿರ್ತೇವೆ. ಆದರೆ ಇಲ್ಲೊಬ್ಬ ಪ್ರೀತಿಯಲ್ಲಿ ಸೋತವರಿಗೆ ಮಾದರಿಯಾಗಿದ್ದಾನೆ.
ಹೌದು… ಡೆಹ್ರಾಡೂನ್ನ ದಿವ್ಯಾಂಶು ಬಾತ್ರ ಎಂಬ ಯುವಕನೊಬ್ಬನಿಗೆ ತಾನು ಪ್ರೀತಿಸುತ್ತಿರುವ ಹುಡುಗಿ ಸಿಗಲಿಲ್ಲ. ಹಾಗಂಥ ಅವನು ಕಣ್ಣೀರು ಹಾಕಿಕೊಂಡು ಕೂರಲಿಲ್ಲ. ಹೇಗಾದರೂ ಹೊಸ ಬದುಕಿನ ಹಾದಿಗೆ ಬರಲೇ ಬೇಕೆಂದು ಚಹಾ ಅಂಗಡಿಯ ಬ್ಯುಸಿನೆಸ್ ಆರಂಭಿಸಿದ್ದಾನೆ. 21 ವರ್ಷದ ದಿವ್ಯಾಂಶು ಬಾತ್ರ, ತನ್ನ ಈ ಟೀ ಅಂಗಡಿಗೆ, ‘ದಿಲ್ ಟೂಟಾ ಆಶಿಕ್- ಚಾಯ್ ವಾಲಾ’ ಎಂದು ಹೆಸರಿಟ್ಟಿದ್ದಾನೆ. ಅಂದ್ರೆ ಹೃದಯ ಒಡೆದ ಪ್ರೀತಿ ಅಂತಾ… ಇದೀಗ ಆತ ಅಂಗಡಿಗೆ ಇಟ್ಟ ಹೆಸರು ಫುಲ್ ವೈರಲ್ ಆಗಿದೆ.
ಕೊರೋನಾ ವೈರಸ್ ಲಾಕ್ಡೌನ್ ವೇಳೆ ಲವ್ ಬ್ರೇಕಪ್ ಆದ ಕಾರಣ ತನ್ನ ಈ ಹೊಸ ಬ್ಯುಸಿನೆಸ್ಗೆ ಈ ಹೆಸರಿಟ್ಟಿದ್ದಾನೆ ಈತ. “ನನ್ನ ಹೈಸ್ಕೂಲ್ ದಿನಗಳಿಂದಲೂ ನನಗೊಬ್ಬ ಗರ್ಲ್ಫ್ರೆಂಡ್ ಇದ್ದು, ಆಕೆಯ ಹೆತ್ತವರು ನಮ್ಮ ಪ್ರೇಮದ ವಿರುದ್ಧ ಇದ್ದ ಕಾರಣ ಆಕೆಯೊಂದಿಗೆ ಬ್ರೇಕ್ಅಪ್ ಆಗಿದೆ. ಇದಾದ ಬಳಿಕ ಆರು ತಿಂಗಳ ಮಟ್ಟಿಗೆ ಡಿಪ್ರೆಸ್ ಆಗಿದ್ದ ನಾನು ಬರೀ ಪಬ್ಜಿ ಆಡಿಕೊಂಡು ಕಾಲ ಕಳೆದಿದ್ದೆ” ಎಂದು ಬಾತ್ರಾ ಹೇಳಿಕೊಂಡಿದ್ದಾನೆ.
ಆದರೆ ಇದೇ ನೋವಿನಲ್ಲಿ ಬಹಳ ದಿನ ಕಳೆಯಬಾರದು ಎಂದು ನಿರ್ಧರಿಸಿದ ಬಾತ್ರಾ, ತನ್ನ ಉಳಿತಾಯದ ದುಡ್ಡನ್ನು ಬಳಸಿಕೊಂಡು ಟೀ ಅಂಗಡಿ ತೆರೆದಿದ್ದಾನೆ, ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ಸಿ ಪದವಿ ಪಡೆದಿರುವ ಬಾತ್ರಾ, ತನ್ನ ಕಿರಿಯ ಸಹೋದರ ರಾಹುಲ್ ಜೊತೆಗೆ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.